ಕಲಬುರಗಿ: ಚಿತ್ರಕಲೆಯು ತನ್ನದೇ ಆದ ವೈಶಿಷ್ಠೃತೆ ಹೊಂದಿದ್ದು, ಕಲಾವಿದರು ಅಮೋಘ ಚಿತ್ರಗಳನ್ನು ಬಿಡಿಸುತ್ತಾರೆ. ಸಾರ್ವಜನಿಕರು ಚಿತ್ರಗಳನ್ನು ಖರೀದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ಸೀತನೂರ ಆರ್ಟ್ ಗ್ಯಾಲರಿಯಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಮೋಹನ ಸೀತನೂರ ಅವರ ಕಲಾಯಾನದ ಹಿನ್ನೋಟ ಕಾರ್ಯಕ್ರಮದಲ್ಲಿ ಮಾತನಾಡಿ, ಚಿತ್ರಕಲಾವಿದರು ಒಂದು ಚಿತ್ರ ಬಿಡಿಸಲು ಸಾಕಷ್ಟು ಕಷ್ಟ ಪಡುತ್ತಾರೆ. ಆದರೆ ಅವರ ಚಿತ್ರಗಳು ಮಾರಾಟವಾಗುವ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸಬೇಕಾಗುತ್ತದೆ. ಖರೀದಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಮಾತನಾಡಿ, ಕಲಾವಿದರು ಕುಟುಂಬದ ಕಡೆಗೆ ಗಮನ ಹರಿಸದೆ ಉತ್ತಮ ಚಿತ್ರ ಬಿಡಿಸುತ್ತಾರೆ. ಆದರೆ ಶ್ರಮಕ್ಕೆ ತಕ್ಕಂತೆ ಫಲ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಆನೆಗುಂದಿ ಮಹಾ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ, ಬ್ರಹ್ಮಪುರ ಏಕದಂಡಗಿ ಮಠದ ಶ್ರೀ ಸುರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯನಗರ ಸಾಮ್ರಾಜ್ಯದ ವಂಶಸ್ಥ ಶ್ರೀಕೃಷ್ಣದೇವರಾಯಲು ಗ್ಯಾಲರಿ ಲೋಕಾರ್ಪಣೆ ಮಾಡಿದರು.
ನಾಡೋಜ ಡಾ.ಜೆ.ಎಸ್.ಖಂಡೇರಾವ ಅಧ್ಯಕ್ಷತೆ ವಹಿದ್ದರು. ಅಂತಾರಾಷ್ಟ್ರೀಯ ಕಲಾವಿದ ವಾಸುದೇವ ಕಾಮತ್, ಪ್ರಮುಖರಾದ ರಾಘವೇಂದ್ರ ಮೈಲಾಪುರ, ಮೋಹನ ಸೀತನೂರ, ಮಾನಯ್ಯ ಬಡಿಗೇರ ಇತರರಿದ್ದರು. ಶಾಂತಾ ಭೀಮಸೇನರಾವ, ಡಾ. ಅಶೋಕ ಶೆಟಕಾರ ನಿರೂಪಣೆ ಮಾಡಿದರು