ಸಾವಿರಾರು ವರ್ಷಗಳ ಹಿಂದಿನಿಂದಲೂ ಈ ಭೂಮಂಡಲದ ಬಗ್ಗೆ ತಿಳಿಯಲು ಪ್ರಯತ್ನಿಸಿದರು. ಆಗ ಕೇವಲ 4 ಗುಡಿಸಲು, 8-10 ಜನರು ಇದ್ದರು. ಈ ಭೂಮಂಡಲದ ಬಗ್ಗೆ ಅರಿತರು. ಅವರಿಗೆ ನಾವು ಋಷಿಮನಿಗಳು ಅನ್ನುತ್ತೇವೆ. ಚಲನಶೀಲ ವಸ್ತುಗಳು ಇಲ್ಲಿ ಇವೆ. ಚಲನೆಯನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಅದು ದೇಹವೇ ಇರಲಿ, ವಸ್ತುವೇ ಇರಲಿ; ಸ್ಥಿರಗೊಳಿಸಲು ಸಾಧ್ಯವಿಲ್ಲ.
ಸೂರ್ಯ, ಚಂದ್ರ ನಮ್ಮ ಮನಸು… ಎಲ್ಲವೂ ಚಲಿಸುತ್ತವೆ. ಅವನ್ನು ತಡೆಯಲು ಸಾಧ್ಯವೇ ಎಂದು ಯೋಚಿಸಿ, ಅಂದು ಈ ವಿಶ್ವಕ್ಕೆ ‘ಜಗತ್ತು’ ಎಂದು ಕರೆದರು…
ಎಷ್ಟೇ ಬಲಿಶಾಲಿ ಇದ್ದರೂ ಒಂದು ದಿನ ಕುಗ್ಗ ಬೇಕಾಗುತ್ತದೆ. ಆರಂಭ ಯಾವುದು ಆಗುತ್ತದೆಯೋ ಅದು ಮುಕ್ತಾಯ ಆಗುತ್ತದೆ. ಯಾವುದೂ ಶಾಶ್ವತ ಅಲ್ಲ. ಚಲಿಸದ ವಸ್ತು ಅದು ಒಂದೇ, ಆಕಾಶ!
ಈ ಜಗತ್ತು ವಿಶಿಷ್ಟ. ಚಲಿಸದ ವಸ್ತು ಪೂರ್ಣ ಆಗಿರುತ್ತದೆ. ಅಲ್ಲಿ ಗುಣ, ರೂಪ ಯಾವುದೂ ಇರುವುದಿಲ್ಲ. ಯಾವ ವಸ್ತು ಚಲನೆ ಮಾಡುತ್ತದೋ ಅದಕ್ಕೆ ರೂಪ, ಗುಣ, ಅಂದ ಚೆಂದ ಇರುತ್ತದೆ. ಯಾವುದಕ್ಕೆ ‘ಪೂರ್ಣತೆ’ ಇರುತ್ತದೆಯೋ ಅದಕ್ಕೆ ನಮ್ಮ ಋಷಿಗಳು ಬಯಲು ಅಂತ ಹೆಸರಿಟ್ಟರು. ಸದಾ ಸತ್ಯ, ಅನಂತ, ದೇವರು ಅಂತ ಹೆಸರು ಕೊಟ್ಟರು. ಯಾವುದೇ ವಸ್ತು ತೆಗೆದುಕೊಳ್ಳಿ, ನಿಲ್ಲಿಸಲು ಸಾಧ್ಯವಿಲ್ಲ. ನಾವು ತಿಳಿದುಕೊಳ್ಳುವುದು ಏನೆಂದರೆ: ನಾವು ಯಾವುದನ್ನೂ ನಿಲ್ಲಿಸಲು ಸಾಧ್ಯವಿಲ್ಲ ಅಂತ ಅರಿತರೆ ನಾವು ಸಂತೋಷದಿಂದ ಇರಬಹುದು. ನಾವು ಶಾಶ್ವತ ಅಲ್ಲ ಎನ್ನುವುದನ್ನು ಅರಿಯಬೇಕು. ನಮ್ಮ ದೇಹ ಚಲಿಸುತ್ತದೆ ಎಂದು ಅರಿತುಕೊಳ್ಳಬೇಕು. ಹುಟ್ಟಿದ ಮೇಲೆ ಸಾಯಲೇಬೇಕು ಎನ್ನುವುದನ್ನು ಅರಿಯಬೇಕು.
ಮುಂದಿನವರು ಹೋಗಬೇಕು, ಹಿಂದಿನವರು ಬರಬೇಕು. ಇದು ಚಲನ ಆಗುತ್ತಿರಬೇಕು. ಎಷ್ಟೇ ಏರಿದರೂ ಇಳಿತೀವಿ ಎನ್ನುವುದನ್ನು ಅರಿತರೆ ಜೀವನದಲ್ಲಿ ಸುಖ ಇರುತ್ತದೆ. ಇದು ವೈವಿಧ್ಯತೆ…ಸ್ಥಿರವಾಗಿ ಉಳಿಸಲು ಹೋಗ ಬಾರದು. ಇದ್ದಿದ್ದನ್ನು ಅನುಭವಿಸಬೇಕು. ಉದಾಹರಣೆಗೆ- ನೀವು ಮದುವೆಗೆ ಎಲ್ಲರನ್ನೂ ಕರೆಯುತ್ತೀರಿ. ಅವರನ್ನು ಸದಾ ನಿಮ್ಮ ಮನೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವೆ? ಮದುವೆಗೆ ಬರಬೇಕು, ಹೋಗಬೇಕು. ಅದು ಚಲನ.
ಮನುಷ್ಯನ ವಯಸ್ಸಿಗೆ ತಕ್ಕಂತೆ ಎಲ್ಲವೂ ಚಲನೆ ಆಗುತ್ತದೆ ಎಂದು ಅರಿಯಬೇಕು. ಆಗ ನಮ್ಮ ಜೀವನ ಆನಂದಮಯವಾಗಿರುತ್ತದೆ. ಹೂವಿನ ತರಹ ಬದುಕಬೇಕು. ಹೂವಿಗೆ ಗೊತ್ತು ತನ್ನದು ಒಂದೇ ದಿನ ಅಂತ. ಅದು ಆನಂದದಿಂದ ಇರುತ್ತದೆ. ಚಲನೆ ಮಾಡುವುದೇ ಜಗತ್ತು ಅಂತ ಅರಿತರೆ ಸಾಕು.