ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ರಾಜ್ಯ ಸರ್ಕಾರದ 14 ದಿನ ಜನತಾ ಕರ್ಯ್ೂ ಘೋಷಣೆ ಬೆನ್ನಲ್ಲೆ ತಂಡೋಪತಂಡವಾಗಿ ನಗರ ತೊರೆಯುತ್ತಿರುವ ಜನರು ಗ್ರಾಮಗಳತ್ತ ದೌಡಾಯಿಸುತ್ತಿರುವುದು ಗ್ರಾಮಗಳಲ್ಲಿ ಕರೊನಾಂತಕ ಹೆಚ್ಚಿಸಿದೆ.
ವಾರಾಂತ್ಯದ ಕರ್ಯ್ೂ ಹಿನ್ನೆಲೆಯಲ್ಲಿ ಈಗಾಗಲೇ ಬಹಳಷ್ಟು ಮಂದಿ ಗ್ರಾಮಗಳಲ್ಲಿ ಠಿಕಾಣಿ ಹೂಡಿದ್ದಾರೆ. ಇದರ ಬೆನ್ನಲ್ಲೆ ಸಾವಿರಾರು ಮಂದಿ ಒಮ್ಮೆಲೆ ಹಳ್ಳಿಗಳಿಗೆ ದಾಂಗುಡಿ ಇಡುತ್ತಿರುವುದು ಗ್ರಾಮಗಳಲ್ಲಿ ಕಳವಳ ಸೃಷ್ಟಿಸಿದೆ.
ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳೂ ಸಿಲಿಕಾನ್ ಸಿಟಿ ಗಡಿ ಹಂಚಿಕೊಂಡಿವೆ. ಈಗಾಗಲೇ ಬೆಂಗಳೂರಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಅಂಕೆ ಮೀರಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಬೆಂಗಳೂರು ಮತ್ತಿತರ ಮಹಾನಗರಗಳಿಂದ ವಲಸೆ ಬರುತ್ತಿರುವ ಜನರಿಂದ ಗ್ರಾಮಗಳಲ್ಲಿ ಕರೊನಾ ತೀವ್ರಗೊಳ್ಳುವ ಆತಂಕ ಮನೆ ಮಾಡಿದೆ.
ನೋ ಟೆಸ್ಟಿಂಗ್: ನಗರ ತೊರೆದು ಹಳ್ಳಿ ಸೇರುತ್ತಿರುವ ಯಾರೊಬ್ಬರೂ ಕರೊನಾ ತಪಾಸಣೆಗೊಳಗಾಗಿಲ್ಲ. ಏಕಾಏಕಿ ಗಂಟುಮೂಟೆಯೊಂದಿಗೆ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಇದರಿಂದ ಕರೊನಾ ಸೋಂಕಿತರು ಪ್ರವೇಶಿಸಿದರೆ ಹಳ್ಳಿಗಳಲ್ಲೂ ಸೋಂಕು ತೀವ್ರಗೊಳ್ಳಬಹುದು ಎಂಬ ಚಿಂತೆ ವ್ಯಕ್ತವಾಗಿದೆ.
ಗ್ರಾಮಗಳಿಗೆ ಬೇಲಿ: ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ನಗರ ತೊರೆದು ಹಳ್ಳಿಗಳಿಗೆ ಬರಬಹುದು. ಇಲ್ಲಿಯೂ ಕರೊನಾ ತೀವ್ರವಾಗಬಹುದು ಎಂಬ ಆತಂಕಕ್ಕೊಳಗಾಗಿರುವ ಹಲವು ಗ್ರಾಮದ ಮುಖಂಡರು ಕಳೆದ ಬಾರಿಯಂತೆ ಗ್ರಾಮಗಳ ಪ್ರವೇಶಕ್ಕೆ ಬೇಲಿ ಹಾಕುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಊರಿನ ಮುಖಂಡರು ಸಭೆಗಳನ್ನು ನಡೆಸಿ ಗ್ರಾಮಸ್ಥರ ಒಮ್ಮತದ ಅಭಿಪ್ರಾಯದ ಮೇಲೆ ಈ ನಿರ್ಧಾರ ಕೈಗೊಳ್ಳುವ ಮಾತುಗಳು ಕೇಳಿಬರುತ್ತಿವೆ.
ಹಳ್ಳಿಗಳಲ್ಲೂ ಕ್ವಾರಂಟೈನ್: ನಗರ ತೊರೆದು ಬರುತ್ತಿರುವ ಜನರನ್ನು ಹಳ್ಳಿಗಳಿಗೆ ಸೇರಿಸದೆ ಇದ್ದರೆ ತಪ್ಪಾಗುತ್ತದೆ. ಬದಲಿಗೆ ಅಂಥವರನ್ನು ನಾಲ್ಕೈದು ದಿನ ಕ್ವಾರಂಟೈನ್ ಮಾಡುವುದು ಉತ್ತಮ ಎಂಬ ಸಲಹೆಗಳು ಕೇಳಿಬರುತ್ತಿವೆ. ಎಲ್ಲರೂ ಸಂಬಂಧಿಕರು, ಇದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಹೊಟ್ಟೆಪಾಡಿಗೆ ನಗರ ಸೇರಿದ್ದಾರೆ. ಇಂಥ ಕಷ್ಟ ಪರಿಸ್ಥಿತಿಯಲ್ಲಿ ಅವರಿಗೆ ನೆರವಾಗಬೇಕು ಎಂಬ ಗ್ರಾಮದ ಮುಖಂಡರ ಮಾನವೀಯ ಕಾಳಜಿ ಹಿನ್ನೆಲೆಯಲ್ಲಿ ಅಂಥವರನ್ನು ಮನೆಗೆ ನೇರವಾಗಿ ಸೇರಿಸದೆ ಕೆಲ ದಿನ ಪ್ರತ್ಯೇಕವಾಗಿ ಇಡಬೇಕು. ಕರೊನಾ ತಪಾಸಣೆಗೊಳಪಡಿಸಬೇಕೆಂಬ ಮಾತುಕತೆ ನಡೆಯುತ್ತಿದೆ.
ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಗಳು ಭರ್ತಿ: ಗ್ರಾಮಾಂತರ ಜಿಲ್ಲೆಯಲ್ಲಿಯೂ ದಿನೇದಿನೆ ಕರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, ಕೋವಿಡ್ ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕರೊನಾ ಸೋಂಕಿತರ ನಿರ್ವಹಣೆ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಹಲವು ಮಹಾನಗರಗಳಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಲಸಿಗರು ಜಮೆಯಾಗುತ್ತಿರುವುದರಿಂದ ಕರೊನಾ ತಪಾಸಣೆ ತೀವ್ರಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.