ಬಸವಕಲ್ಯಾಣ: ಮುನಿಸಿಕೊಂಡ ವರುಣನಿಗಾಗಿ ಕೊಹಿನೂರಿನ ಗ್ರಾಮಸ್ಥರು ಶನಿವಾರ ಗೊಂಬೆಗಳ ಮದುವೆ ಮಾಡಿ ಪ್ರಾರ್ಥಿಸಿದರು. ಮದುವೆ ನಂತರ ಕೆಲ ನಿಮಿಷಗಳ ಕಾಲ ಮಳೆ ಆಗಮಿಸಿದ್ದರಿಂದ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.
ಸಕಲ ಸಿದ್ದತೆಯೊಂದಿಗೆ ಮದುವೆಗೆ ದಿನ ನಿಶ್ಚಯಿಸಿ ಶಾಸ್ತ್ರೋಕ್ತವಾಗಿ ಮಾಡಿ ಭಕ್ತಿಯಿಂದ ವರುಣನಿಗೆ ಪ್ರಾರ್ಥಿಸಿದರು. ಮೊದಲು ಭಾಜಾ ಭಜಂತ್ರಿಯೊಂದಿಗೆ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ತೆರಳಿ ನೀರು ಸುರಿದು ನಂತರ ಗ್ರಾಮದ ಗುರುಸ್ಥಳ ಹೊರಗಿನ ಮಠದ ಆವರಣದಲ್ಲಿ ಮದುವೆ ಸಮಾರಂಭ ನಡೆಯಿತು.
ಸುರಗಿ ಸುತ್ತಿ ಎಣ್ಣೆ ಹಚ್ಚಿ, ಸ್ನಾನ ಮಾಡಿಸಿ ನಂತರ ಹೊಸ ಬಟ್ಟೆ ತೊಡಿಸಿ ಪೂಜಾರಿ ಅವರಿಂದ ಮಂತ್ರ ಪಠಿಸಿ ಮದುವೆ ಮಾಡಿದರು. ಗೊಂಬೆಗಳಿಗೆ ಅಕ್ಷತೆ ಹಾಕಿದ ನಂತರ ಸಿದ್ದಪಡಿಸಿ ಪ್ರಸಾದ ಸ್ವೀಕರಿಸಿ ಮನೆಗೆ ತೆರಳಿದರು.
ಪ್ರಮುಖರಾದ ನರಸಪ್ಪ ಜಮಾದಾರ, ರತಿಕಾಂತ ಕೊಹಿನೂರ, ಸಂಜೀವಕುಮಾರ, ಪ್ರಭಾವತಿ ಭೋಸಲೆ, ವಂದನಾ ಎಂಪಾಳೆ, ತೇಜಸ್ವೀನಿ ಎಂಪಾಳೆ, ಭಾಗ್ಯಶ್ರೀ ಜಮಾದಾರ, ರೇಖಾ ಇತರರು ಭಾಗವಹಿಸಿದ್ದರು.