ನೆಲಮಂಗಲ: ತಾಲೂಕಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂಗಾರು ಪೂರ್ವ ಮಳೆಯಾಗಿದೆ. ಇದರಿಂದ ಇಳೆ ಹದವಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿವೆ.
ಕೆಲದಿನಗಳಿಂದ ತಾಲೂಕಿನಾದ್ಯಂತ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಿರುವುದರಿಂದ, ಸಣ್ಣಪುಟ್ಟ ಕೆರೆ, ಕುಂಟೆಗಳಿಗೆ ನೀರು ಬಂದಿದೆ. ಇದರಿಂದಾಗಿ ಭಿತ್ತನೆ ಕಾರ್ಯಗಳಿಗೆ ರೈತರು ಮುಂದಾಗಿದ್ದಾರೆ.
ಬೇಸಿಗೆ ಆರಂಭಕ್ಕೂ ಮುನ್ನವೇ ಕರೊನಾ ಸೋಂಕಿನ ಆತಂಕ ಒಂದೆಡೆಯಾದರೆ ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದ್ದು, ರೈತರನ್ನು ಕಂಗೆಡೆಸಿತ್ತು. ಆದರೀಗ ಕೆಲ ದಿನಗಳ ಅಂತರದಲ್ಲಿ ಮುಂಗಾರುಪೂರ್ವ ಮಳೆಯಾಗಿದ್ದು ಬಿರುಬಿಸಿಲಿನಿಂದ ಬಸವಳಿದಿದ್ದ ಜನ, ಜಾನುವಾರುಗಳು ನಿಟ್ಟುಸಿರು ಬಿಡುವಂತಾಗಿದೆ. ಏರಿದ್ದ ತಾಪಮಾನ ಕೂಡ ಹತೋಟಿಗೆ ಬರಲಾರಂಭಿಸಿದೆ.
ಈಗಾಗಲೇ ಮುಸುಕಿನ ಜೋಳ, ತೊಗರಿ, ಅಲಸಂದೆ ಮತ್ತು ನೆಲಗಡಲೆ ಭಿತ್ತನೆ ಮಾಡಲಾಗುತ್ತಿದೆ. ಮುಂದಿನ ಕೆಲ ವಾರಗಳಲ್ಲಿ ರಾಗಿ, ಅವರೆ, ಹುರುಳಿ ಬೆಳೆಗಳ ಭಿತ್ತನೆ ಕಾರ್ಯವೂ ಆರಂಭವಾಗಲಿದೆ.
ಮೇವಿನ ಕೊರೆತ ನೀಗಿಸಿದ ಮಳೆ: ಈ ಬಾರಿ ಭರಣಿ ಮಳೆ ಧರಣಿಯನ್ನು ತಂಪಾಗಿಸಿದರೆ, ಕೃತಿಕಾ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದು ಇಳೆಯನ್ನು ಮತ್ತಷ್ಟು ಹೆದಗೊಳಿಸಿದಳು. ಇದು ರೈತರ ಮೊಗದಲ್ಲಿ ಸಂತವನ್ನು ತಂದಿದೆ. ಜತೆಗೆ, ಬೇಸಿಗೆಯಲ್ಲಿ ಎದುರಾಗಬಹುದಾಗಿದ್ದ ಮೇವಿನ ಕೊರತೆಯೂ ನೀಗಿದೆ.
ತಾಲೂಕಿನಲ್ಲಿ ಬೇಡಿಕೆಗೆ ತಕ್ಕಷ್ಟು ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದೆ. ಕಳೆದೆರಡು ದಿನಗಳಿಂದ ಬಿದ್ದ ಮಳೆಯಿಂದ ತಾಲೂಕಿನಾದ್ಯಂತ ಕೃಷಿ ಚಟುವಟಿಗಳು ಚುರುಕಾಗಿವೆ. ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇರುವುದರಿಂದ, ಪೂರೈಕೆಗೆ ಯಾವುದೇ ಅಡ್ಡಿಯಾಗುವುದಿಲ್ಲ.
ರಾಘವೇಂದ್ರ, ತಾಲೂಕು ಕೃಷಿ ಸಹಾಯಕ ನಿರ್ದೇಶಕ