ರೈತನಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ ಪಟ್ಟಣದ ನೀರಾವರಿ ಇಲಾಖೆಯ ವಾಹನ ಮತ್ತು ಕಂಪ್ಯೂಟರ್ ಪೀಠೋಪಕರಣ ಜಪ್ತಿ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ನೀರಾವರಿ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಸಂಬಂಧಿಸಿದ ಮಹೀಂದ್ರಾ ಜೀಪ್, ೪ ಕಂಪ್ಯೂಟರ್ ಸಿಸ್ಟಮ್, ಪ್ರಿಂಟರ್ ಮತ್ತು ವಿವಿಧ ಪೀಠೋಪಕರಣಗಳನ್ನು ಬೆಳಗಾವಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಿಕೊಳ್ಳಲಾಗಿದೆ.
ಏನಿದು ಘಟನೆ: ಮಲಪ್ರಭಾ ಬಲದಂಡೆ ಕಾಲುವೆ ವ್ಯಾಪ್ತಿಗೆ ಒಳಪಡುವ ಸವದತ್ತಿ ತಾಲೂಕಿನ ಕಗಧಾಳ ಗ್ರಾಮದ ರೈತರಾದ ಭೀಮರಡ್ಡಿ ಅಪ್ಪಣ್ಣ ಮೇಟಿ ಹಾಗೂ ಮುತ್ತುರಡ್ಡಿ ಭೀಮರಡ್ಡಿ ಮೇಟಿ ಎಂಬುವರಿಗೆ ಸೇರಿದ ೭೦೯. ೬೬ ಸ್ಕ್ವೇರ್ ಮೀಟರ್ ಸವಳು-ಜವಳು ಜಮೀನಿನ ಖುಲ್ಲಾ ಜಾಗೆ ಮತ್ತು ಮನೆಯನ್ನು ೨೦೧೫ ರಲ್ಲಿ ಅಂದಿನ ಸರ್ಕಾರದಿಂದ ಭೂಸ್ವಾಧೀನ ಪಡಿಸಿಕೊಂಡು ೧೪ ಲಕ್ಷ ೮೪ ಸಾವಿರ ರೂಪಾಯಿ ಪರಿಹಾರ ನೀಡಲಾಗಿತ್ತು. ಆದರೆ, ಜಮೀನು ನೀಡಿದ ರೈತ ಪ್ರತಿ ಸ್ಕ್ವೇರ್ ಮೀಟರ್ ಗೆ ತಲಾ ೨ ಸಾವಿರ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ೨೦೧೮ ರಲ್ಲಿ ೨೯ ಲಕ್ಷ ೫೦ ಸಾವಿರ ರೂಪಾಯಿ ಪರಿಹಾರವನ್ನು ಬಡ್ಡಿ ಸಮೇತ ನೀಡುವಂತೆ ಆದೇಶಿಸಿತ್ತು. ಪರಿಹಾರದ ಹಣ ನೀಡಲು ವಿಳಂಬ ಮಾಡಿದ್ದರಿಂದ ನೀರಾವರಿ ಇಲಾಖೆಗೆ ೨೭-೦೧-೨೦೨೨ ರಲ್ಲಿ ವಾರಂಟ್ ನೀಡಿದ್ದರೂ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಕಚೇರಿಯ ವಾಹನ, ಕಂಪ್ಯೂಟರ್ ಪೀಠೋಪಕರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ವಕೀಲ ತಿಮ್ಮಣ್ಣ ಅರಕೇರಿ ತಿಳಿಸಿದರು.
ನರಗುಂದ ನೀರಾವರಿ ಕಾರ್ಯಪಾಲಕ ಅಭಿಯಂತರ ಕಚೇರಿ ವಾಹನ, ಕಂಪ್ಯೂಟರ್, ಪ್ರಿಂಟರ್ ಗಳನ್ನು ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡರು.