ಹುಕ್ಕೇರಿ, ಬೆಳಗಾವಿ: ಪಟ್ಟಣದ ಅಡವಿಸಿದ್ದೇಶ್ವರ ಜಾನಪದ ಕಲಾವಿದರ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಗಡಿ ಕನ್ನಡ ಸಾಂಸ್ಕೃತಿಕ ಸಮಾರಂಭ ಸಂಭ್ರಮದಿಂದ ಜರುಗಿತು.
ಕ್ಯಾರಗುಡ್ಡದ ಅವಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಗಡಿಭಾಗ ಶೈಕ್ಷಣಿಕ ಪ್ರಗತಿಯಲ್ಲಿ ಹಿಂದುಳಿದಿದೆ. ಕನ್ನಡ ಶಾಲೆಗಳ ಮತ್ತು ಶಿಕ್ಷಕರ ಕೊರತೆಯಿದೆ. ಕನ್ನಡ ಭಾಷೆ ಹಾಗೂ ಸಂಸ್ಕೃತಿ ಕಣ್ಮರೆಯಾಗುತ್ತಿದ್ದು, ಅದನ್ನು ಉಳಿಸಿ, ಬೆಳಸಬೇಕಿದೆ ಎಂದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಕನ್ನಡ ನಾಡಿನ ಗತ ವೈಭವ ಸಾರುವ ಜಾನಪದ, ಸಂಸ್ಕೃತಿ ಮತ್ತು ಕಲೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಜಾನಪದ ಕಲಾವಿದರು ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಪುರಸಭೆ ಅಧ್ಯಕ್ಷ ಎ.ಕೆ. ಪಾಟೀಲ, ವಿಜಯವಾಣಿ ದಿನಪತ್ರಿಕೆ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಮಹಾವೀರ ನಿಲಜಗಿ, ಕಜಾಪ ಅಧ್ಯಕ್ಷ ಸುಭಾಷ ನಾಯಿಕ, ಭೀಮಪ್ಪ ಹುದ್ದಾರ, ಕರ್ನಾಟಕ ಲಲಿತ ಅಕಾಡಮಿ ಸದಸ್ಯ ಜಯಾನಂದ ಮಾದರ, ಸಾಹಿತಿಗಳಾದ ಈಶ್ವರಚಂದ್ರ ಬೆಟಗೇರಿ, ಅಕ್ಬರ್ ಸನದಿ, ಲಕ್ಷ್ಮಣ ಚೌರಿ, ಕಾಡಪ್ಪ ಉಪ್ಪಾರ ಇತರರಿದ್ದರು.