ಹುಕ್ಕೇರಿ: ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ವಿಷಯ ಪ್ರಸ್ತಾಪವಾದರೆ, ಅಲ್ಲಿ ಸಚಿವ ಉಮೇಶ ಕತ್ತಿ ಅವರ ಹೆಸರು ಕೇಳಿ ಬರುತ್ತಿತ್ತು ಎಂದು ಕೇಂದ್ರದ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿರುವ ಸಚಿವ ಉಮೇಶ ಕತ್ತಿ ಅವರ ಮನೆಗೆ ಸೋಮವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಕತ್ತಿ ಅವರು ಕೇವಲ ಪ್ರಚಾರಕ್ಕಾಗಿ ಧ್ವನಿ ಎತ್ತುತ್ತಿರಲಿಲ್ಲ. ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ಇವರದ್ದಾಗಿತ್ತು. ಇಂತಹ ಗಟ್ಟಿ ಧ್ವನಿಯ ನಾಯಕನನ್ನು ಕಳೆದುಕೊಂಡ ನಮ್ಮಲ್ಲಿ ಅನಾಥ ಭಾವ ಮೂಡಿದೆ ಎಂದರು.
ಬಿಜೆಪಿಯ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ಬಿಡಿಸಿಸಿ ಅಧ್ಯಕ್ಷ ರಮೇಶ ಕತ್ತಿ, ನಿಖಿಲ್ ಕತ್ತಿ, ಪವನ ಕತ್ತಿ, ಪೃಥ್ವಿ ಕತ್ತಿ ಇತರರಿದ್ದರು.