ವಿಜಯಪುರ: ತಿಕೋಟಾ ಗ್ರಾಪಂನಲ್ಲಿ ಖೊಟ್ಟಿ ಠರಾವು ಮಂಡಿಸಿ ಆಸ್ತಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳುಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಖಾಸಗಿ ಆಸ್ಪತ್ರೆ ವೈದ್ಯನೋರ್ವ ಉಪ ಲೋಕಾಯುಕ್ತರ ಮುಂದೆ ಅಳಲು ತೋಡಿಕೊಂಡರು.
ಸೋಮವಾರ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಮುಗಿಸಿ ಹೊರ ಬಂದ ಉಪ ಲೋಕಾಯುಕ್ತರ ಬಿ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿರುವ ವೈದ್ಯ ಚನ್ನಬಸಪ್ಪ ಊರ್ಫ್ ರಾಜು ಬೆಳಗಾವಿ, ಪ್ರಕರಣದಡಿ ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ನಡೆ ಬಗ್ಗೆ ನೋವು ತೋಡಿಕೊಂಡರು.
ತಿಕೋಟಾ ಗ್ರಾಪಂನ ಈ ಹಿಂದಿನ ಪಿಡಿಒ ಹಾಗೂ 29 ಸದಸ್ಯರು ಸೇರಿ ಜೀವಂತವಿದ್ದ ಅಜ್ಜಿಯನ್ನು ಸತ್ತಿರುವುದಾಗಿ ಠರಾವು ಮಂಡಿಸಿ ಅಜ್ಜಿ ಹೆಸರಿನ ಆಸ್ತಿಯನ್ನು ಬೇರೊಬ್ಬರ ಹೆಸರಿಗೆ ನೋಂದಾಯಿಸಿ ಠರಾವು ಮಂಡಿಸಿದ್ದಾರೆ. ಈ ಬಗ್ಗೆ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಆದರೂ ಈವರೆಗೆ ಕ್ರಮವಾಗಿಲ್ಲ. ಸದರಿ ಠರಾವು ರದ್ಧತಿಗಾಗಿ ತಾಪಂ ಇಒ ಸುಮಾರು 15 ತಿಂಗಳ ಸುದೀರ್ಘ ತನಿಖೆ ನಡೆಸಿ ಇದೀಗ ಅಸ್ತಿತ್ವಕ್ಕೆ ಬಂದಿರುವ ತಾಪಂನ ನೂತನ ಅಧ್ಯಕ್ಷರ ಮೇಲ್ಮನವಿಯನ್ನು ದಾಖಲಿಸಿ ಸುಮಾರು 5 ತಿಂಗಳಾದರೂ ಕ್ರಮವಾಗಿಲ್ಲ. ಇನ್ನಾದರೂ ನ್ಯಾಯ ಒದಗಿಸಬೇಕೆಂದು ಡಾ.ಬೆಳಗಾವಿ ದಯನೀಯವಾಗಿ ಬೇಡಿಕೊಂಡರು. ಕೂಡಲೇ ಕ್ರಮ ಕೈಗೊಳ್ಳುವುದಾಗಿ ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ ಭರವಸೆ ನೀಡಿದರು.