ಗುಂಡ್ಲುಪೇಟೆ: ಬಹುತೇಕ ಕೆರೆಗಳಿಗೆ ನದಿಮೂಲದಿಂದ ಕಳೆದ ವರ್ಷ ನೀರು ತುಂಬಿಸಿದ್ದರಿಂದ ಕ್ಷೇತ್ರದಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಅಭಿಪ್ರಾಯಪಟ್ಟರು.
ಲೋಕೋಪಯೋಗಿ ಇಲಾಖೆಯ ವತಿಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ತಗ್ಗಲೂರು ಬೆಟ್ಟದಮಾದಹಳ್ಳಿ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಬಹುತೇಕ ಕೆರೆಗಳು ತುಂಬಿ ಹರಿದಿವೆ. ಆದರೂ ತಾಲೂಕಿನ ದೊಡ್ಡ ಜಲಾಶಯವಾದ ನಲ್ಲೂರು ಅಮಾನಿ ಕೆರೆಗೆ ನೀರು ಹರಿದಿಲ್ಲ. ಇಲ್ಲಿಗೆ ನದಿಮೂಲದಿಂದ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ ಎಂದರು.
ತಾಲೂಕಿನ ಎಲ್ಲ ಕೆರೆಗಳನ್ನೂ ತುಂಬಿಸುವ ಸಲುವಾಗಿ ಪೈಪ್ ಲೈನ್ ಅಳವಡಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಗ್ರಾಮಾಂತರ ಪ್ರದೇಶಗಳ ರಸ್ತೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು. ಮುಖಂಡರಾದ ಹೊರೆಯಾಲ ಮಹೇಶ್, ರವಿ, ಎಲ್.ಸುರೇಶ್ ಇತರರು ಇದ್ದರು.