ಸಾಗರ: ಕನ್ನಡ ನಾಡಿನ ಇತಿಹಾಸ, ಚರಿತ್ರೆಯನ್ನು ಆದರ್ಶವಾಗಿ ಕವಿಗಳು, ಸಾಹಿತಿಗಳು, ಕಲಾವಿದರು ದಾಖಲಿಸುತ್ತ ಬಂದಿದ್ದಾರೆ. ಇಂದು ಕೋಟಿಕಂಠ ಗಾಯನದ ಮೂಲಕ ತಾಯಿ ಭುವನೇಶ್ವರಿಗೆ ನಮನ ಸಲ್ಲಿಸುತ್ತಿದ್ದೇವೆ ಎಂದು ನಗರ ಬಿಜೆಪಿ ಅಧ್ಯಕ್ಷ ಕೆ.ಆರ್.ಗಣೇಶ್ಪ್ರಸಾದ್ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಿಜೆಪಿಯಿಂದ ನಗರದ ಶಾಶ್ವತ ಕನ್ನಡ ಧ್ವಜದ ಎದುರು ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಚಿವರು ಐತಿಹಾಸಿಕ ಕಾರ್ಯಕ್ರಮವೊಂದನ್ನು ಇಂದು ದಾಖಲಿಸಿದ್ದಾರೆ, ಶಿವಮೊಗ್ಗ ಜಿಲ್ಲೆಯಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಜನರು ಕೋಟಿ ಕಂಠ ಗಾಯನಕ್ಕೆ ಆನ್ಲೈನ್ನಲ್ಲಿ ನೊಂದಣಿ ಮಾಡಿಕೊಂಡಿದ್ದಾರೆ. ಹೊರರಾಜ್ಯ ಮತ್ತು ಹೊರದೇಶದಲ್ಲಿರುವ ಕನ್ನಡ ನಾಡಿನ ಜನತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷ ಎಂದರು.
ನಗರಸಭಾ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ ಕನ್ನಡಿಗರ ಕನ್ನಡದ ಅಭಿಮಾನ ಎಷ್ಟು ಎಂಬುದು ಈ ಕಾರ್ಯಕ್ರಮದ ಮೂಲಕ ಜಗತ್ತಿಗೆ ಪರಿಚಯಿಸಿದ್ದೇವೆ, ಕನ್ನಡ ನಾಡಿನ ಕವಿಗಳ ಗೀತೆಗಳನ್ನು ಒಟ್ಟಾಗಿ ಹಾಡುವ ಮೂಲಕ ನಮ್ಮ ಸಾಂಗಿಕಾ ಶಕ್ತಿ ಪರಿಚಯಿಸಿದ್ದೇವೆ ಎಂದರು.
ಹಿರಿಯ ಕಲಾವಿದೆ ಎಸ್.ಕೆ.ಪ್ರಭಾವತಿ, ರಾಘವೇಂದ್ರ ನಾಯ್ಡು, ಉಮೇಶ್, ಇತರ ಕಲಾವಿದರನ್ನು ಸನ್ಮಾನಿಸಲಾಯಿತು.