ಚಿಂಚೋಳಿ : ಕಲಬುರಗಿ-ಬೀದರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಈಗಾಗಲೇ ಕಲಬುರಗಿಯ ಅಫಜಲಪುರ ಸೇರಿ ಇತರೆಡೆ ವೀಕ್ಷಣೆ ಮಾಡಿದ್ದು, ಸಮಗ್ರ ವರದಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ವಹಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.
ತಾಲೂಕಿನ ನಾಗಇದಲಾಯಿ ಗ್ರಾಮದ ಹೊರ ವಲಯದಲ್ಲಿರುವ ಒಡೆದು ಹೋಗಿರುವ ಕೆರೆ ಪರಿಶೀಲಿಸಿ ಮಾತನಾಡಿದ ಅವರು, ಸರ್ಕಾರವು ಈಗಾಗಲೇ ಕೆರೆಗಳಿಗೆ ನೀರು ತುಂಬುವ ಯೋಜನೆ ಜಾರಿಯಲ್ಲಿದ್ದು, ಶೀಘ್ರದಲ್ಲಿ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.
ಕೆರೆ ನಿರ್ವಹಣೆ 198ಕೋಟಿ ಹಾಗೂ ಕೆರೆಗೆ ನೀರು ತುಂಬುವ ಯೋಜನೆಗಾಗಿ ಈಗಾಗಲೇ ಜಿಲ್ಲೆಗಳಿಗೆ 72 ಕೋಟಿ ರೂ.ಜಿಲ್ಲೆಗೆ ಅನುದಾನ ಒದಗಿಸಲಾಗಿದೆ ಎಂದರು.
ಇದಕ್ಕೂ ಮುಂಚೆ ರಟಕಲ್-ರೇವಗ್ಗಿಯ ರೇವಣಸಿದ್ದೇಶ್ವರ ದೇವರ ದರ್ಶನ ಪಡೆದು ನಂತರ ಪ್ರವಾಹದಿಂದ ವಿವಿಧ ಕೆರೆಗಳ ಕೊಡಿ ಒಡೆದು ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿದರು.
ಸಂಸದ ಡಾ. ಉಮೇಶ ಜಾಧವ್, ಸರ್ಕಾರದ ಮುಖ್ಯಕಾರ್ಯದರ್ಶಿ ಮೃತ್ಯುಂಜಯ್ಯ ಸ್ವಾಮಿ, ವಿಜಯಪುರ ವಿಭಾಗಿಯ ಅಭಿಯಂತರ ಜಿ.ಟಿ ಸುರೇಶ, ಸಣ್ಣ ನೀರಾವರಿ ಇಲಾಖೆ ಅಭಿಯಂತರ ಸುರೇಶ ಶರ್ಮಾ , ಅಭಿಯಂತರ ಶಿವಶರಣಪ್ಪ ಕೇಶ್ವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ ಕವಿತಾಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನೀಲಕುಮಾರ ರಾಠೋಡ್, ಬಿಜೆಪಿ ತಾಲೂಕು ಅಧ್ಯಕ್ಷ ಸಂತೋಷ ಗಡಂತಿ, ಶ್ರೀಮಂತ ಕಟ್ಟಿಮನಿ, ಭೀಮಶೆಟ್ಟಿ ಮುರುಡಾ, ಉದಯಕುಮಾರ, ಅರುಣ ಪವಾರ, ಹಣಮಂತ ಭೋವಿ, ರಾಜು ಪವಾರ, ಜಗಜೀವನರೆಡ್ಡಿ ಮಿರಿಯಾಣ, ಕೃಷ್ಣಪ್ಪ ಪೂಜಾರಿ, ಪಾಂಡು ಮಿರಿಯಾಣ, ಶಂಕರ ಮಿರಿಯಾಣ, ವಿನೋದ ಔರಾದಿ ಸೇರಿ ಅನೇಕರು ಇದ್ದರು.