More

    ಕಾಲೇಜು ಕಿರಿಯ ವಿದ್ಯಾರ್ಥಿಗೆ ರ‌್ಯಾಗಿಂಗ್, ಮಂಗಳೂರಿನಲ್ಲಿ ಕೇರಳ ಮೂಲದ 9 ಮಂದಿಯ ಬಂಧನ

    ಮಂಗಳೂರು: ನಗರದ ಖಾಸಗಿ ಕಾಲೇಜೊಂದರ ಮೊದಲ ವರ್ಷದ ಬಿ- ಫಾರ್ಮಾ ಕಲಿಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗೆ ರ‌್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿ 9 ವಿದ್ಯಾರ್ಥಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
    ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷದ ಬಿ ಫಾರ್ಮಾ ವಿದ್ಯಾರ್ಥಿಗಳಿಂದ ರ‌್ಯಾಗಿಂಗ್ ನಡೆದಿದ್ದು, ಎಲ್ಲರೂ ಕೇರಳ ಮೂಲದವರು ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ತೃತೀಯ ಬಿ ಫಾರ್ಮಾದ ಜಿಷ್ಣು(20), ಶ್ರೀಕಾಂತ ಪಿ.ವಿ.(20), ಅಶ್ವಂತ್(20), ಸಯಂತ್(22), ಅಭಿರತ್ ರಾಜೀವ್(21), ದ್ವಿತೀಯ ಬಿ ಫಾರ್ಮಾದ ರಾಹುಲ್ ಪಿ.(21), ಜಿಷ್ಣು (20), ಮುಖ್ತಾರ್ ಅಲಿ(19), ಮುಹಮ್ಮದ್ ರಝೀಮ್ ಕೆ(20) ಬಂಧಿತರು.

    ಪ್ರಕರಣದ ವಿವರ: ಜ.10ರಂದು ಮಧ್ಯಾಹ್ನ 2 ಗಂಟೆಗೆ ತರಗತಿ ಮುಗಿಸಿ ಹಾಸ್ಟೆಲ್ ಕಡೆಗೆ ಹೋಗುತ್ತಿದ್ದ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಆರೋಪಿಗಳು ತಡೆದು ತಲೆಕೂದಲು ಹಾಗೂ ಮೀಸೆ ತೆಗೆದು ಬರಬೇಕೆಂದು ಜೋರು ಮಾಡಿ ಹಲ್ಲೆಗೈದಿದ್ದರು. ಮೀಸೆ ಹಾಗೂ ತಲೆ ಕೂದಲು ತೆಗೆಯದ ವಿದ್ಯಾರ್ಥಿಯನ್ನು ಜ.12ರಂದು ಮಧ್ಯಾಹ್ನ 2 ಗಂಟೆಗೆ ಮತ್ತೆ ತಡೆದು, ತಾವೇ ಮೀಸೆ-ಕೂದಲು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ವಿದ್ಯಾರ್ಥಿ ದೂರು ನೀಡಿರುವ ಹಿನ್ನೆಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ಪ್ರಕರಣದಲ್ಲಿ ವಿದ್ಯಾರ್ಥಿ ಪಾಲಕರು ಡಿಸಿಪಿಗೆ ಕರೆ ಮಾಡಿ, ತಮ್ಮ ಮಗ ಏಕಾಏಕಿ ಕಾಲೇಜು ಬಿಟ್ಟು ಬಂದಿದ್ದು, ಮತ್ತೆ ಹೋಗಲು ಹಿಂಜರಿಯುತ್ತಿದ್ದಾನೆ. ಆತ ಹಾಸ್ಟೆಲ್ ಶಿಕ್ಷಣಕ್ಕಾಗಿ ಪಾವತಿಸಿರುವ 2 ಲಕ್ಷ ರೂ.ಗಳನ್ನು ವಾಪಸ್ ಕೊಡಿಸುವಲ್ಲಿ ಸಹಕರಿಸುವಂತೆ ವಿನಂತಿಸಿದ್ದರು. ಮಾಹಿತಿ ಕಲೆ ಹಾಕಿದಾಗ ವಿದ್ಯಾರ್ಥಿಗಳಿಗೆ ಐದಾರು ದಿನಗಳ ಕಾಲ ರ‌್ಯಾಗಿಂಗ್ ನಡೆಸಿರುವುದು ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದರು.
    ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.

    ಇತರ ನಾಲ್ವರಿಗೂ ಕಿರುಕುಳ: ರ‌್ಯಾಗಿಂಗ್‌ಗೆ ಒಳಗಾಗಿರುವ ವಿದ್ಯಾರ್ಥಿಯನ್ನು 2 ಲಕ್ಷ ರೂ. ಶುಲ್ಕ ಪಾವತಿಸಿ ಕಾಲೇಜಿಗೆ ದಾಖಲಿಸಲಾಗಿತ್ತು. ಈ ಕಿರಿಯ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳು ಪಿಜಿಗೆ ಕರೆಸಿಕೊಂಡು ಹಲ್ಲೆ ನಡೆಸಿರುವ ಸಂದರ್ಭ ಅವನ ಜತೆಗಿದ್ದ ಇತರ ನಾಲ್ವರು ಕಿರಿಯ ವಿದ್ಯಾರ್ಥಿಗಳೂ ರ‌್ಯಾಗಿಂಗ್‌ಗೆ ಒಳಗಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಶಶಿಕುಮಾರ್ ಹೇಳಿದರು.

    ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ: ನಗರದ ಕಾಲೇಜುಗಳಲ್ಲಿ ರ‌್ಯಾಗಿಂಗ್ ನಡೆಯದಂತೆ ಆಯಾ ಶಿಕ್ಷಣ ಸಂಸ್ಥೆಗಳೇ ಎಚ್ಚರಿಕೆ ವಹಿಸಬೇಕು. ಇಂಥ ಪ್ರಕರಣಗಳಿಗೆ ಸಂಸ್ಥೆಗಳೂ ಜವಾಬ್ದಾರಿಯಾಗುತ್ತವೆ. ತಮ್ಮ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸುರಕ್ಷತೆ ಖಾತ್ರಿಪಡಿಸಬೇಕು. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳೊಂದಿಗೆ ಸಹೋದರರಂತೆ ವರ್ತಿಸಬೇಕು. ರ‌್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಣ ಸಂಸ್ಥೆಗಳು ಅಸಹಾಯಕತೆ ಪ್ರದರ್ಶಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

    ಹಿರಿಯ ವಿದ್ಯಾರ್ಥಿಗಳಿಂದ ರ‌್ಯಾಗಿಂಗ್ ನಡೆದಾಗ ಕಿರಿಯರು ದೂರು ನೀಡಲು ಹಿಂಜರಿಯುತ್ತಾರೆ, ಅದಕ್ಕಾಗಿ ಶಿಕ್ಷಣ ಸಂಸ್ಥೆಗಳು ರ‌್ಯಾಗಿಂಗ್ ವಿರೋಧಿ ಸಮಿತಿಗಳ ಮೂಲಕ ಕಿರಿಯ ವಿದ್ಯಾರ್ಥಿಗಳ ಆಪ್ತಸಮಾಲೋಚನೆ ನಡೆಸಬೇಕು. ದೂರುಗಳು ಬಂದಾಗ ಹಾಸ್ಟೆಲ್ ವಾರ್ಡನ್, ಕಾಲೇಜಿನ ಪ್ರಾಂಶುಪಾಲರು ಶಿಸ್ತು ಕ್ರಮ ಅನುಸರಿಸಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts