ಬೆಳಗಾವಿ: ಮಧ್ಯಪ್ರದೇಶದಿಂದ ಕಿತ್ತೂರಿಗೆ ಬಂದಿದ್ದ 28 ಜನ ಕಾರ್ಮಿಕರನ್ನು ಹಾಗೂ ಐದು ಜನ ಮಕ್ಕಳನ್ನು ರಕ್ಷಿಸಿ ಅವರನ್ನು ಜ.28ರಂದು ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲು ಮೂಲಕ ಮಧ್ಯಪ್ರದೇಶದ ಕೌದಿಯಾ, ಕಟ್ನಿ ಜಿಲ್ಲೆಗಳಿಗೆ ಕಳುಹಿಸಿಕೊಡಲಾಯಿತು. ಬಸ್ ನಿಲ್ದಾಣದಲ್ಲಿ ಅಸಹಾಯಕರಾಗಿ ನಿಂತಿದ್ದ ಕಾರ್ಮಿಕರನ್ನು ಖಚಿತ ಮಾಹಿತಿ ಮೇರೆಗೆ ಜ. 27ರಂದು ಸಂಜೆ ಕಿತ್ತೂರು ತಹಸೀಲ್ದಾರ್, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬಸ್ಸಿನಲ್ಲಿ ಕರೆದುಕೊಂಡು ಬಂದು ಬೆಳಗಾವಿ ನಗರದ ನಿರ್ಗತಿಕ ಕೇಂದ್ರದಲ್ಲಿ ಇರಿಸಿ ಮರುದಿನ ರೈಲು ಮೂಲಕ ಮಧ್ಯಪ್ರದೇಶಕ್ಕೆ ಕಳುಹಿಸಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾರ್ಗದರ್ಶನದಲ್ಲಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ್ ಬಗಲಿ, ಕಿತ್ತೂರು ತಹಸೀಲ್ದಾರ್ ಅಷ್ಟಗಿಮಠ, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಜ್ಯೋತಿ ಕಾಂತೆ, ರಾಜೇಶ್ ಅಸ್ನೋಟೀಕರ್ ಕಾರ್ಯಾಚರಣೆ ಕೈಗೊಂಡಿದ್ದಾರೆ.