ಮೂಡಲಗಿ: ಮೂಡಲಗಿಯಿಂದ ಧರ್ಮಟ್ಟಿ ಮಾರ್ಗವಾಗಿ ಮಸಗುಪ್ಪಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಪಿಎಂಜಿಎ ವೈ ಯೋಜನೆಯಡಿ 7.86 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಸಕಾಲಕ್ಕೆ ಪೂರ್ಣಗೊಳಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚಿಸಿದ್ದಾರೆ.
ಗುರುವಾರ ತಾಲೂಕಿನ ಮಸಗುಪ್ಪಿ ಕ್ರಾಸ್ ಬಳಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ಕೈಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ರಸ್ತೆ ಅಭಿವೃದ್ಧಿಯಿಂದ ಮಸಗುಪ್ಪಿ, ಗುಜನಟ್ಟಿ, ಜೋಕಾನಟ್ಟಿ, ಧರ್ಮಟ್ಟಿ, ಮೂಡಲಗಿ ಸೇರಿ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸಂಚಾರಕ್ಕೆ ನೆರವಾಗಲಿದೆ ಎಂದರು. ಲೋಳಸೂರದಿಂದ ಬಳೋಬಾಳವರೆಗಿನ 6 ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿ ಆರಂಭಿಸಲಾಗಿದ್ದು, ಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಕಲ್ಲಪ್ಪ ಉಪ್ಪಾರ, ಪತ್ರಯ್ಯ ಚರಂತಿಮಠ, ಬಸು ಭುಜಣ್ಣವರ, ಸಂಜು ಹೊಸಕೋಟಿ, ಬಿ.ಬಿ.ಪೂಜೇರಿ, ಲಕ್ಷ್ಮಣ ಕೆಳಗಡೆ, ಪರಶುರಾಮ ಸನದಿ, ಲಗಮಣ್ಣ ಕುಟ್ರಿ, ರಾಮಪ್ಪ ಅರಬಾವಿ, ಮಹಾದೇವ ಬಡ್ಡಿ, ಭರಮಪ್ಪ ಅಶಿರೊಟ್ಟಿ, ಎ.ಇ.ಮಲ್ಲೇಶ ದೇಶೂರ, ಸುಧಾಕರ ಶೆಟ್ಟಿ, ಸಿ.ಪಿ.ಯಕ್ಸಂಬಿ ಇದ್ದರು.
ಮತಕ್ಷೇತ್ರದಲ್ಲಿ ಕರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಜನರಿಗೆ ಲಸಿಕೆ ಪಡೆಯಲು ಜಾಗೃತಿ ಮೂಡಿಸುತ್ತಿದ್ದಾರೆ. ಜನರು ಸರ್ಕಾರದ ಮಾರ್ಗಸೂಚಿ ಪಾಲಿಸಿ ಸೋಂಕು ನಿಯಂತ್ರಣಕ್ಕೆ ಕೈ ಜೋಡಿಸಬೇಕು.
| ಬಾಲಚಂದ್ರ ಜಾರಕಿಹೊಳಿ ಶಾಸಕ