More

    ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಮೀಸಲಾತಿಯನ್ನೂ ಬದಲಾಯಿಸಲು ಆಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಮೀಸಲಾತಿಯಲ್ಲಿ ಬದಲಾವಣೆ ತಂದಿದ್ದೇವೆ. ಲಿಂಗಾಯತರು ಮತ್ತು ಒಕ್ಕಲಿಗರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಿದ್ದೇವೆ. ಬಹಳ ವರ್ಷದ ಬೇಡಿಕೆಯಾಗಿದ್ದ ಒಳ ಮೀಸಲಾತಿಯನ್ನು ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಕಾಲದಲ್ಲಿಯೇ ಆಯೋಗ ರಚಿಸಲಾಗಿತ್ತು. ಆದರೆ, ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತರಲಿಲ್ಲ. ನಾವು ತಂದಿರುವುದರಿಂದ ಹೊಟ್ಟೆಕಿಚ್ಚು ಹೆಚ್ಚಿದೆ ಎಂದರು.

    ತಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುತ್ತೇವೆ ಎನ್ನುತ್ತಿದ್ದಾರೆ. ಇದರ ಅರ್ಥ ಒಕ್ಕಲಿಗರಿಗೆ, ಲಿಂಗಾಯಿತರಿಗೆ ಮೀಸಲಾತಿ ಕೊಟ್ಟಿರುವುದಕ್ಕೆ ಕಾಂಗ್ರೆಸ್​ಗೆ ಸಹಮತ ಇಲ್ಲ. ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾತ್ರ ಕಾಂಗ್ರೆಸ್ ಶಾಸಕರು ಹೋರಾಟ ಮಾಡಿದರು. ಎಲ್ಲರಿಗೂ ಮೀಸಲಾತಿ ಹೆಚ್ಚಿಸುವ ತಾಕತ್ತು ಕಾಂಗ್ರೆಸ್​ಗೆ ಇರಲಿಲ್ಲ. ಅವೈಜ್ಞಾನಿಕವಾಗಿ, ಅಸಂವಿಧಾನಿಕವಾಗಿ ಮುಸ್ಲಿಮರಿಗೆ ಇವರು ಮೀಸಲಾತಿ ಕೊಟ್ಟಿದ್ದರು. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಬರುವುದಿಲ್ಲ. ಹೀಗಾಗಿ ಮುಸ್ಲಿಮರ ಮೀಸಲಾತಿಯನ್ನು ನಾವು ರದ್ದು ಮಾಡಿದ್ದೇವೆ. ಬಿಜೆಪಿ ಸರ್ಕಾರ ನಿರ್ಣಾಯಕ ಸರ್ಕಾರ ಎಂದು ಹೇಳಿದರು.

    ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಆದರೆ, ಬಿಜೆಪಿ ಸರ್ವರಿಗೂ ಸಮಾನತೆ ಕೊಡುವ ಕೆಲಸ ಮಾಡುತ್ತಿದೆ. ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳ ಮೇಲೆ ಒತ್ತಡ ಹೇರಿಲ್ಲ. ಡಿಕೆಶಿ ಹೇಳಿಕೆ ಅತ್ಯಂತ ಬಾಲಿಷ. ಧಮ್ಕಿ ಹಾಕುವುದು ಡಿಕೆ ಶಿವಕುಮಾರ ಸಂಸ್ಕೃತಿ. ಕಾರ್ಯಕರ್ತರಿಗೆ ಹೊಡೆಯೋದು ಸಿದ್ದರಾಮಯ್ಯ ಅವರ ಸಂಸ್ಕೃತಿ. ಡಿಕೆಸಿ ಅವರದ್ದು ಗೂಂಡಾ ಸಂಸ್ಕೃತಿ ಆಗಿರುವುದರಿಂದ ಧಮ್ಕಿ ಹಾಕುತ್ತಾರೆ. ನಾವ್ಯಾಕೆ ಶ್ರೀಗಳಿಗೆ ಧಮ್ಕಿ ಹಾಕೋಣ. ಈ ಹೇಳಿಕೆ ಮೂಲಕ ಡಿಕೆಶಿ ಅವರು ಶ್ರೀಗಳಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

    ಸೋಲಿನ ಭೀತಿ: ಸೋಲಿನ ಭೀತಿಯಿಂದ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬದಾಮಿಯಲ್ಲಿ ಕೆಲವೇ ಮತಗಳ ಅಂತರದಿಂದ ಗೆದ್ದಿದ್ದರು. ಆದರೀಗ ಮತ್ತೊಮ್ಮೆ ಸೋಲಿನ ಭೀತಿ ಕಾಡುತ್ತಿದೆ. ಕೋಲಾರ ಆಯ್ತು, ರಾಜ್ಯದ ವಿವಿಧ ಕ್ಷೇತ್ರಗಳಾಯ್ತು. ಈಗ ವರುಣಾ ಟಿಕೇಟ್ ಅಂತಿಮವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಜರಿದರು.

    ಇದಕ್ಕೆ ಸಿದ್ದರಾಮಯ್ಯ ನಡೆದುಕೊಂಡ ರೀತಿಯೇ ಕಾರಣ. ಕೆ.ಎಚ್. ಮುನಿಯಪ್ಪ, ಡಾ.ಜಿ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಸಿದ್ದರಾಮಯ್ಯ ಕಾರಣ. ಹೀಗಾಗಿ, ಅವರೆಲ್ಲರೂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣತೊಟ್ಟಿದ್ದಾರೆ. ಸಿದ್ಧರಾಮಯ್ಯ ದಲಿತ ವಿರೋಧಿ. ಐದು ವರ್ಷ ಸಿಎಂ ಆಗಿದ್ದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಂದು ಕ್ಷೇತ್ರವಿಲ್ಲ. ಸ್ಪರ್ಧಿಸಿದರೂ ಸಿದ್ಧರಾಮಯ್ಯ ಯಾವ ಕ್ಷೇತ್ರದಲ್ಲಿಯೂ ಗೆಲ್ಲುವುದಿಲ್ಲ. 25 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಆಹ್ವಾನ ಮಾಡುತ್ತಿದ್ದಾರೆ ಎನ್ನುವುದು ಡ್ರಾಮಾ. ಗೆಲ್ಲುತ್ತಾರೆ ಎನ್ನುವುದಾದರೆ ಒಂದು ಕಡೆ ಫೈನಲ್ ಮಾಡಲಿ. ನಮ್ಮ ಸಿಎಂ ಸೇರಿ ಉಳಿದ ನಾಯಕರು ಒಂದೇ ಕಡೆ ಸ್ಪರ್ಧಿಸುತ್ತಾರೆ. ಹಾಗೆಯೇ ಸಿದ್ದರಾಮಯ್ಯ ಒಂದೇ ಕಡೆ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts