More

    ಕಲ್ಲು ಕ್ವಾರಿಗಳ ಮರು ಆರಂಭಕ್ಕೆ ಪೂರ್ವ ಸಿದ್ಧತೆ

    ಕಾರವಾರ: ಜಿಲ್ಲೆಯಲ್ಲಿ ನಿಯಮಾನುಸಾರ ಕಲ್ಲು ಕ್ವಾರಿಗಳನ್ನು ಪುನರಾರಂಭಿಸಲು ಸಿದ್ಧತೆ ನಡೆದಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕ್ರಶರ್ ಹಾಗೂ ಕ್ವಾರಿ ಟಾಸ್ಕ್​ಫೋರ್ಸ್ ಸಮಿತಿ ಸಭೆಯಲ್ಲಿ ಈ ಕುರಿತು ವಿಸ್ತ್ರತ ಚರ್ಚೆ ನಡೆಯಿತು.
    ಜಿಲ್ಲೆಯ 16 ಕಡೆ ಕ್ವಾರಿಗಾಗಿ ಜಾಗ ಗುರುತಿಸಿ ಮಾಲೀಕರು ಗೋವಾ ವಿಭಾಗದ ಗಣಿ ಸುರಕ್ಷತೆ ಮಹಾ ನಿರ್ದೇಶಕರ ಕಚೇರಿಗೆ (ಡಿಜಿಎಂಎಸ್)ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 9 ಜನರಿಗೆ ಅರ್ಜಿ ಸ್ವೀಕೃತವಾದ ಬಗ್ಗೆ ಲೇಬರ್ ಐಡೆಂಟಿಫಿಕೇಶನ್ ನಂಬರ್ ನೀಡಲಾಗಿದ್ದು, ಇನ್ನು 6 ಜನರಿಗೆ ಮೈನಿಂಗ್ ಕೋಡ್(ಕ್ವಾರಿ ಪ್ರಾರಂಭಿಸಲು ಪ್ರಾಥಮಿಕ ಅನುಮತಿ) ದೊರೆತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಸೋಮಶೇಖರ ಸಭೆಗೆ ಮಾಹಿತಿ ನೀಡಿದರು.
    ಕ್ವಾರಿ ಆರಂಭಿಸುವಾಗ ಕೈಗೊಳ್ಳಬೇಕಾದ ಸುರಕ್ಷತೆಯ ಬಗ್ಗೆ ಹಾಗೂ ನಿಯಮಾವಳಿಗಳ ಬಗ್ಗೆ ಡಿಜಿಎಂಎಸ್ ಅಧಿಕಾರಿಗಳನ್ನು ಕರೆಸಿ ಅಧಿಕಾರಿಗಳು ಮತ್ತು ಕ್ವಾರಿ ಮಾಲೀಕರಿಗೆ ಕಾರ್ಯಾಗಾರ ಆಯೋಜಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚಿಸಿದರು.
    ರಾಮನಗರದಲ್ಲಿ ಅಧ್ಯಯನ: ಜಿಲ್ಲೆಯ ಹೆಚ್ಚಿನ ಕ್ವಾರಿ ಹಾಗೂ ಕ್ರಶರ್​ಗಳು ಜೊಯಿಡಾ ತಾಲೂಕಿನ ರಾಮನಗರದಲ್ಲಿವೆ. ಕ್ವಾರಿ ಹಾಗೂ ಕ್ರಶರ್​ಗಳಿಂದ ಪರಿಸರ ಹಾಗೂ ಜನಜೀವನಕ್ಕೆ ಹಾನಿಯಾಗುತ್ತದೆ ಎಂಬ ದೂರುಗಳಿದ್ದ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ಖಾಸಗಿ ಕಂಪನಿಯ ಮೂಲಕ ಅಲ್ಲಿ ಈಗಾಗಲೇ ಪರಿಸರ ಹಾನಿ ಅಧ್ಯಯನ ಮಾಡಿಸಲಾಗಿದೆ. ಕಂಪನಿ ಪ್ರಾಥಮಿಕ ವರದಿ ನೀಡಿದ್ದು, ವಿಸ್ತ್ರತ ವರದಿ ನೀಡಿದ ನಂತರ ಅದನ್ನು ಅವಲೋಕಿಸಿ ಕ್ವಾರಿ ಪುನರಾರಂಭದ ತೀರ್ಮಾನ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ಕಾಮಗಾರಿ ಕೈಗೊಂಡಿರುವ ನಾಗಾರ್ಜುನ ಕನ್ಸ್​ಟ್ರಕ್ಷನ್ ಕಂಪನಿಗೆ ಕ್ರಶರ್ ಪ್ರಾರಂಭಕ್ಕೆ ಸಭೆಯಲ್ಲಿ ಅನುಮತಿ ನೀಡಲಾಯಿತು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಸೋಮಶೇಖರ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
    14 ಕ್ವಾರಿಗಳು ಬಂದ್: ಜನವರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಕ್ವಾರಿಯೊಂದರಲ್ಲಿ ಸ್ಫೋಟ ಸಂಭವಿಸಿದ ನಂತರ ಎಚ್ಚೆತ್ತ ಸರ್ಕಾರ ಕೇಂದ್ರ ಕಾರ್ವಿುಕ ಸಚಿವಾಲಯದ ಅಡಿ ಇರುವ ಡೈರೆಕ್ಟರ್ ಜನರಲ್ ಆಫ್ ಮೈನ್ಸ್ ಸೇಫ್ಟಿ(ಡಿಜಿಎಂಎಸ್)ಅವರ ಅನುಮತಿ ಪಡೆದ ನಂತರವೇ ಕ್ವಾರಿಗಳನ್ನು ಪ್ರಾರಂಭಿಸಬೇಕು ಎಂದು ಆದೇಶಿಸಿತ್ತು. ಡಿಜಿಎಂಎಸ್ ಅನುಮತಿ ಇಲ್ಲದ ಕಾರಣ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರ ಹಾಗೂ ವಿವಿಧೆಡೆ ಇರುವ ಒಟ್ಟು 14 ಕ್ವಾರಿಗಳು ಬಂದ್ ಆಗಿದ್ದವು. ಈಗ ಡಿಜಿಎಂಎಸ್​ನಿಂದ ಅನುಮತಿ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts