ಕಲಬುರಗಿ: ಹಿಜಾಬ್ ವಿವಾದ, ಕರೊನಾ ಆತಂಕದ ಮಧ್ಯೆಯೇ ಜಿಲ್ಲಾದ್ಯಂತ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭಗೊಂಡವು. ಮೊದಲ ದಿನ ಕನ್ನಡ ಭಾಷಾ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ನಿಯಮ ಉಲ್ಲಂಘನೆ ಸೇರಿ ಯಾವುದೇ ನಕಲು, ಅಹಿತಕರ, ವಿವಾದಾತ್ಮಕ ಘಟನೆಗಳು ನಡೆದಿಲ್ಲ.
173 ಕೇಂದ್ರಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯೂ ಸಕಲ ಸಿದ್ಧತೆಯೊಂದಿಗೆ ಪರೀಕ್ಷೆಗೆ ಮುಂದಡಿ ಇಟ್ಟಿದ್ದು, ಬೆಳಗ್ಗೆ 9ಗಂಟೆಯಿಂದಲೇ ವಿದ್ಯಾರ್ಥಿಗಳನ್ನು ಪಾಲಕರು, ಪೋಷಕರು ಕರೆತಂದು ಬಿಟ್ಟರು. 9.30ರೊಳಗೆ ಭಾಗಶಃ ಎಲ್ಲ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸಿದರು.
ಕರೊನಾ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್ ಸಾ್ಕೃನಿಂಗ್, ಸ್ಯಾನಿಟೈಸ್ ಮಾಡಲಾಯಿತು. ಪ್ರತ್ಯೇಕವಾಗಿ ಎರಡು ಕಡೆ ತಪಾಸಣೆ ನಡೆಸಿ ಕೈಗಡಿಯಾರ, ಮೊಬೈಲ್ಗಳನ್ನು ಇರಿಸಿಕೊಳ್ಳಲಾಯಿತು. ಜಿಲ್ಲೆಯಲ್ಲಿ ಒಟ್ಟು 46,407 ವಿದ್ಯಾರ್ಥಿಗಳಲ್ಲಿ 44,172 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 2235 ಜನರು ಗೈರಾಗಿದ್ದಾರೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಪೋಷಕರು, ಪಾಲಕರು ಬಿಸಿಲಿಗೆ ಬಸವಳಿದರು. ಮೂರುವರೆ ಗಂಟೆ ಪರೀಕ್ಷಾ ಕೇಂದ್ರ ಸಮೀಪದ ಹೊಟೇಲ್, ಮರಗಳನ್ನು ಆಶ್ರಯಿಸಿದ್ದರು.
ಹಿಜಾಬ್ ಗೊಂದಲವಿಲ್ಲ: ತೀವ್ರ ವಿವಾದಕ್ಕೆ ಈಡಾಗಿರುವ ವಿದ್ಯಾರ್ಥಿನಿಯರ ಹಿಜಾಬ್ ಕುರಿತು ಸೋಮವಾರ ನಡೆದ ಪರೀಕ್ಷೆಯಲ್ಲಿ ಜಿಲ್ಲೆಯ ಎಲ್ಲಿಯೂ ವಿವಾದವಾಗಿಲ್ಲ. ಪರೀಕ್ಷಾ ಕೇಂದ್ರದ ಒಳಗಡೆ ಬರುವವರೆಗೆ ಹಿಜಾಬ್ ಅವಕಾಶ ನೀಡಿದ್ದು, ಕೋಣೆಗೆ ಹೋಗುವ ಮುನ್ನ ಹಿಜಾಬ್ ಕಳಚಲು ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ವಿದ್ಯಾರ್ಥಿನಿಯರು ಹಿಜಾಬ್ ಕಳಚಿಟ್ಟು ಪರೀಕ್ಷೆ ಬರೆದರು.
ಶಾಲೆಗಳಿಗೆ ಅಧಿಕಾರಿಗಳು ಭೇಟಿ: ಸೇಡಂ ತಾಲೂಕಿನಾದ್ಯಂತ ಸೋಮವಾರ ಆರಂಭಗೊಂಡ ಎಸ್ಎಸ್ಎಲ್ಸಿ ಪರೀಕ್ಷೆಯೂ ಯಾವುದೇ ಅಡೆ ತಡೆ ಇಲ್ಲದೆ ಸುಸೂತ್ರವಾಗಿ ನಡೆದವು. ಒಟ್ಟು 13ಪರೀಕ್ಷಾ ಕೇಂದ್ರಗಳಲ್ಲಿ 3541 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿತ್ತು, ಆದರೆ 3327 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ, 214 ಮಕ್ಕಳು ಪರೀಕ್ಷೆಗೆ ಗೈರಾದರು. ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ, ಸಿಪಿಐಗಳಾದ ಆನಂದರಾವ, ಸಂದೀಪಸಿಂಗ ಮುರಗೋಡ ಆಯಾ ಪ್ರದೇಶದ ಶಾಲೆಗಳಿಗೆ ಭೇಟಿ ನೀಡಿ ಕಟ್ಟೆಚ್ಚರ ವಹಿಸಿದ್ದರು.
212 ವಿದ್ಯಾರ್ಥಿಗಳು ಗೈರು: ಅಫಜಲಪುರ ತಾಲೂಕಿನಲ್ಲಿ 17 ಕೇಂದ್ರಗಳಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿವೆ. ನೋಂದಾಯಿತ 4307 ವಿದ್ಯಾರ್ಥಿಗಳಲ್ಲಿ 4095 ಮಕ್ಕಳು ಪರೀಕ್ಷೆ ಬರೆದಿದ್ದು, 212 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ದೇಶಮುಖ ತಿಳಿಸಿದ್ದಾರೆ.
ಪರೀಕ್ಷೆಗೆ ಬಂದಿದ್ರು 12 ನಕಲಿ ಸ್ಟೂಡೆಂಟ್ಸ್: ಮಾದನಹಿಪ್ಪರಗಿ: ಅತಿ ಸೂಕ್ಷ್ಮ ಪರೀಕ್ಷೆ ಕೇಂದ್ರವಾಗಿರುವ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸೋಮವಾರ 12 ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಬರೆದರು. ಕೇಂದ್ರದಲ್ಲಿ ಒಟ್ಟು 25 ಸ್ಟೂಡೆಂಟ್ಸ್ ಗೈರಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಆಯುಕ್ತೆ ಗರೀಮಾ ಪನ್ವಾರ್ ಅವರು ಕೇಂದ್ರಕ್ಕೆ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಕಮಲಾಪುರದಲ್ಲಿ ಸುಸೂತ್ರ: ಕಮಲಾಪುರ ತಾಲೂಕಿನಲ್ಲಿ ಒಟ್ಟು 9303 ವಿದ್ಯಾರ್ಥಿಗಳ ಪೈಕಿ 9277 ಮಕ್ಕಳು ಸೋಮವಾರ ಪರೀಕ್ಷೆಗೆ ಹಾಜರಾಗಿದ್ದಾರೆ. ವಿವಿಧ ಕಾರಣಗಳಿಂದಾಗಿ 26 ಸ್ಟೂಡೆಂಟ್ ಗೈರಾಗಿದ್ದಾರೆ. ಒಟ್ಟು 37 ಪರೀಕ್ಷೆ ಕೇಂದ್ರಗಳಿದ್ದು, ಎಲ್ಲೆಡೆ ಸುಸೂತ್ರವಾಗಿ ಎಕ್ಸಾಮ್ ನಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಬೊಮ್ಮನಳ್ಳಿ ತಿಳಿಸಿದ್ದಾರೆ.