ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 7 ಸಾವು ಸೇರಿದಂತೆ 272 ಮಂದಿಗೆ ಕರೊನಾ ಪಾಸಿಟಿವ್ ವರದಿಯಾಗಿದೆ. ಕರೊನಾಗೆ ಮೃತಪಟ್ಟವರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ.
ಮಂಗಳೂರಿನ 163, ಪುತ್ತೂರಿನ 33, ಬಂಟ್ವಾಳದ 30, ಸುಳ್ಯದ 23, ಬೆಳ್ತಂಗಡಿಯ 11, ಹಾಗೂ ಹೊರ ಜಿಲ್ಲೆಯ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 110 ಮಂದಿಯ ಸೋಂಕಿನ ಮೂಲ ತಿಳಿದಿಲ್ಲ. ಐಎಲ್ಐ ಲಕ್ಷಣ ಹೊಂದಿದ್ದ 101 ಮಂದಿ, ಪ್ರಾಥಮಿಕ ಸಂಪರ್ಕದಿಂದ 43 ಮಂದಿ, ತೀವ್ರ ಉಸಿರಾಟ ತೊಂದರೆಯಿದ್ದ 15 ಮಂದಿ, ವಿದೇಶದಿಂದ ಹಿಂದಿರುಗಿದ ಮೂವರಿಗೆ ಕರೊನಾ ದೃಢಪಟ್ಟಿದೆ. ಜಿಲ್ಲೆಯ ಒಟ್ಟು ಪಾಸಿಟಿವ್ ಪ್ರಕರಣ 12,109ಕ್ಕೆ ಏರಿದ್ದು 2,550 ಸಕ್ರಿಯ ಪ್ರಕರಣಗಳಿವೆ. ಶನಿವಾರ ಒಟ್ಟು 236 ಮಂದಿ ಸೋಂಕುಮುಕ್ತಗೊಂಡಿದ್ದಾರೆ. ಬಿಡುಗಡೆಯಾದವರ ಒಟ್ಟು ಸಂಖ್ಯೆ 9209ಕ್ಕೇರಿದೆ.
172 ಮಂದಿಗೆ ಸೋಂಕು: ಉಡುಪಿ ಜಿಲ್ಲೆಯಲ್ಲಿ ಶನಿವಾರ 172 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 11,252ಕ್ಕೆೆ ಏರಿದೆ. ಶನಿವಾರ 219 ಮಂದಿ ಸೋಂಕಿನಿಂದ ಗುಣವಾಗಿ ಬಿಡುಗಡೆಯಾಗಿದ್ದಾರೆ. 789 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ -19 ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. 200 ಮಂದಿಯ ವರದಿ ಬರಲು ಬಾಕಿ ಇದೆ. 2561 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡಿನ 198 ಮಂದಿಗೆ ಕರೊನಾ:ಕಾಸರಗೋಡು: ಜಿಲ್ಲೆಯ 198 ಮಂದಿ ಸೇರಿದಂತೆ ಕೇರಳದಲ್ಲಿ ಶನಿವಾರ 2,397ಮಂದಿಗೆ ಕೋವಿಡ್-19 ಸೊಂಕು ತಗುಲಿದೆ. ರಾಜ್ಯದಲ್ಲಿ ಆರು ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಜಿಲ್ಲೆಯ ಐವರ ಸಹಿತ ರಾಜ್ಯದಲ್ಲಿ 63 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.