ಕೊಡೇಕಲ್ : ಜೊಗುಂಡಬಾವಿ ಗ್ರಾಮದ ಹೊರವಲಯದ ಚಾಪಿ ತಾಂಡಾದ ಕಬ್ಬಿನ ತೋಟದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿ ರೈತರು ಮತ್ತು ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ನಡೆದಿದೆ.
ಚಾಪಿ ತಾಂಡಾದ ರೈತ ತಿಪ್ಪಣ್ಣ ಅವರ ತೋಟದಲ್ಲಿ ಕಬ್ಬು ಕಟಾವು ಮಾಡುವ ವೇಳೆ ಕಾರ್ಮಿಕರ ಕಣ್ಣಿಗೆ ಮೊಸಳೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಕಾರ್ಮಿಕರು ತೋಟದಿಂದ ಹೊರಗಡೆ ಬಂದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ತಂಡೋಪ ತಂಡವಾಗಿ ಬಂದು ದೂರದಿಂದ ಮೊಸಳೆಯನ್ನು ನೋಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಮೊಸಳೆ ಸೆರೆ ಹಿಡಿದರು.
ವಲಯ ಅರಣ್ಯಾಧಿಕಾರಿ ಬುರಾನುದ್ಧೀನ್ ಮಾತನಾಡಿ, ಹತ್ತಿರದಲ್ಲಿ ಕೃಷ್ಣಾ ಮುಖ್ಯ ಕಾಲುವೆ ತುಂಬಿ ಹರಿಯುತ್ತಿರುವುದರಿಂದ ಈ ಮೂಲಕ ಬಂದ ಮೊಸಳೆ ಕಬ್ಬಿನ ತೋಟದಲ್ಲಿ ಸೇರಿಕೊಂಡಿದೆ. ೩ ಕ್ವಿಂಟಾಲ್ ತೂಕದ ಮೊಸಳೆಯನ್ನು ಸೆರೆ ಹಿಡಿದು ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಬಿಡಲಾಗುವುದು ಎಂದರು.
ಉಪ ವಲಯ ಅರಣ್ಯಾಧಿಕಾರಿ ಶರಣಬಸವ ನಾಸು, ಗಸ್ತು ವನ ಪಾಲಕ ಕಾಶೀನಾಥ ಇತರರಿದ್ದರು.