ದಾವಣಗೆರೆ: ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಇದರ ಆಳ ಆಧ್ಯಯನ ಮಾಡಿದಷ್ಟು ಅನರ್ಘ್ಯ ರತ್ನಗಳು ಸಿಗಲಿವೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾಬು ಕೃಷ್ಣಮೂರ್ತಿ ಹೇಳಿದರು.
ಕಲಾಕುಂಚ ಹಾಗೂ ಜಿಲ್ಲೆ ಸಮಾಚಾರ ಬಳಗದ ಸಹಯೋಗದಲ್ಲಿ ರೋಟರಿ ಬಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕನ್ನಡ ಸಾಹಿತ್ಯದಲ್ಲಿ ಪಂಪ, ಕುಮಾರವ್ಯಾಸನಿಂದ ಹಿಡಿದು ಕುವೆಂಪು, ಬೇಂದ್ರೆ ಮೊದಲಾದ ದಿಗ್ಗಜರ ಸಾಹಿತ್ಯ ರೋಮಾಂಚನ ತರಿಸಲಿದೆ. ಕನ್ನಡ ಸಾಹಿತ್ಯದ ಆಳಕ್ಕಿಳಿಯುವ ಕೆಲಸ ಮಾಡಬೇಕು. ಅದನ್ನು ವಿಮರ್ಶೆ ಮಾಡಿ ಸತ್ವ ಕಂಡಕೊಳ್ಳಬೇಕು ಎಂದರು.
ನನಗೆ ಪಂಪ ಪ್ರಶಸ್ತಿ ದೊರೆತದ್ದು ಆಕಸ್ಮಿಕ. ನಾನು ಕನ್ನಡ ಸಾಹಿತ್ಯದಲ್ಲಿ ಬಿಟ್ಟ ಪದಗಳನ್ನು ತುಂಬುವ ಕೆಲಸ ಮಾಡಿದ್ದೆವೆ. ಪ್ರತಿಯೊಂದಕ್ಕೂ ಹುಡುಕಾಟ ನಡೆಸಿ ಕೃತಿ ಬರೆದಿದ್ದೇನೆ. ನನ್ನ ಪುಸ್ತಕಗಳಿಗೆ ಸಾರ್ವಜನಿಕರ ಮಾನ್ಯತೆ ಜತೆಗೆ ಸರ್ಕಾರದ ಮಾನ್ಯತೆ ದೊರಕಿತು ಎಂದು ಹೆಮ್ಮ ವ್ಯಕ್ತಪಡಿಸಿದರು.
ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಮಾತನಾಡಿ ಕ್ರಾಂತಿಕಾರಿಗಳು ಉಳಿಸಿಕೊಟ್ಟ ಸ್ವಾತಂತ್ರ್ಯ ನಮ್ಮ ಕೈಯಲ್ಲಿ ಇಲ್ಲದಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಗಳಿಸಿದ ಸ್ವಾತಂತ್ಯಕ್ಕೆ ನಾವಿಂದು ಅರ್ಹರಾಗಿದ್ದೇವೆಯೇ ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ ಎಂದು ಹೇಳಿದರು.
ಕೇವಲ ಅಹಿಂಸೆಯಿಂದಷ್ಟೇ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿಲ್ಲ. ಕ್ರಾಂತಿಕಾರಿಗಳ ಮೂಲಕವೂ ಸ್ವಾತಂತ್ರ್ಯ ಪಡೆದಿದ್ದೇವೆ. ಎಷ್ಟೋ ಕ್ರಾಂತಿಕಾರಿಗಳು ಎಲೆಮರೆಯ ಕಾಯಿಯಾಗಿ ಉಳಿದುಹೋಗಿದ್ದಾರೆ ಎಂದು ಹೇಳಿದರು.
ರಾಜಕಾರಣದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಶೇ 5ರಷ್ಟು ಮಂದಿ ಮಾತ್ರ ಉತ್ತಮ ರಾಜಕಾರಣಿಗಳಿದ್ದಾರೆ. ಪ್ರಜಾಪ್ರಬುಥ್ವದಲ್ಲಿ ಟೀಕೆ ಮಾಡುವುದು ಉತ್ತಮ ಲಕ್ಷಣವಾಗಿದೆ. ಆದರೆ ಇಂದು ವಾಕ್ ಸ್ವಾತಂತ್ರ್ಯಕ್ಕೆ ತೊಡಕಾಗಿದ್ದು, ದೇಶಪ್ರೇಮ ಬೆಳೆಸುವ ಪರಿಸ್ಥಿತಿ ನಮ್ಮಲ್ಲಿ ಬರಬೇಕು ಎಂದರು. ಮತದಾರರು ನ್ಯಾಯಾಧೀಶರು ತೀರ್ಪು ನೀಡುವಂತೆ ಆಲೋಚಿಸಿ ಮತದಾನ ಮಾಡಬೇಕೆಂದು ಸಲಹೆ ನೀಡಿದರು.
ಜಿಲ್ಲ ಸಮಾಚಾರ ಬಳಗದ ಕೆ.ಎಚ್. ಸತ್ಯಭಾಮಾ ಮಂಜುನಾಥ್, ಪತ್ರಕರ್ತ ವಿ,. ಹನುಮಂತಪ್ಪ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ಎಚ್.ಮಂಜುನಾಥ್, ಸಾಲಿಗ್ರಾಮ ಗಣೇಶ ಶೆಣೈ, ಭಾರತಿ ಇದ್ದರು.
—