ಯಳಂದೂರು: ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಯತ್ನಿಸಿದ ಮಹಾನ್ ನಾಯಕರಲ್ಲಿ ಕನಕದಾಸರು ಒಬ್ಬರು ಎಂದು ಶಾಸಕ ಎನ್. ಮಹೇಶ್ ಬಣ್ಣಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಇವರ ಕೀರ್ತನೆಗಳಲ್ಲಿ ಸಮಾಜದ ಅಂಕುಡೊಂಕು ತಿದ್ದುವ ಜತೆಗೆ ಸಾಮಾಜಿಕ ಅಸಮಾನತೆ ತೊಲಗಿಸಲು ಬೇಕಾದ ಎಲ್ಲ ಅಂಶಗಳೂ ಇತ್ತು. ಮೌಢ್ಯ, ಜಾತೀಯತೆ, ಅಸಮಾನತೆಯನ್ನು ಇಂದಿಗೂ ಕಾಣಬಹುದಾಗಿದ್ದು, ಇಂದಿಗೂ ಪ್ರಸ್ತುತರಾಗಿದ್ದಾರೆ. ಇಂತಹ ಮಹಾನ್ ದಾರ್ಶನಿಕರು ನಮ್ಮ ನಾಡಿನಲ್ಲಿ ಹುಟ್ಟಿರುವುದು ಈ ನೆಲದ ಪುಣ್ಯ ಎಂದರು.
ಮಳೆಯಲ್ಲೇ ಸಾಗಿದ ಮೆರವಣಿಗೆ : ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಂಸಾಳೆ, ನಂದಿಕುಣಿತ, ವೀರಗಾಸೆ, ಡೊಳ್ಳು, ಮಂಗಳವಾದ್ಯ, ಭಜನಾ ತಂಡಗಳೊಂದಿಗೆ ಬೆಳ್ಳಿ ರಥದಲ್ಲಿ ಕನಕದಾಸದ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಳೆಯೂ ಆರಂಭಗೊಂಡಿತು. ಮಳೆಯ ನಡುವೆಯೂ ಜನರು ತಮ್ಮ ಉತ್ಸಾಹವನ್ನು ಕಳೆದುಕೊಳ್ಳದೆ ಇಡೀ ಪಟ್ಟಣದ ತುಂಬೆಲ್ಲ ಮೆರವಣಿಗೆಯಲ್ಲಿ ಸಾಗಿದರು. ಕಲಾತಂಡದ ಸದಸ್ಯರು ಮಳೆಯಲ್ಲೇ ತಮ್ಮ ಕಲಾಪ್ರದರ್ಶನ ಮಾಡಿ ಗಮನ ಸೆಳೆದರು. ಮಾಜಿ ಶಾಸಕರಾದ ಎಸ್. ಜಯಣ್ಣ, ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲರಾಜು ಸಹ ಭಾಗವಹಿಸುವ ಮೂಲಕ ಗಮನ ಸೆಳೆದರು.
ಪಪಂ ಅಧ್ಯಕ್ಷೆ ಪ್ರಭಾವತಿ, ಉಪಾಧ್ಯಕ್ಷೆ ಲಕ್ಷ್ಮೀ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಲ್ಲಯ್ಯ, ಶಾಂತಮ್ಮ, ನಾಮ ನಿರ್ದೇಶಿತ ಸದಸ್ಯರಾದ ಮಹೇಶ್, ರಘು, ತಹಸೀಲ್ದಾರ್ ಆನಂದಪ್ಪ ನಾಯಕ್, ಇಒ ಉಮೇಶ್, ಬಿಇಒ ಕೆ. ಕಾಂತರಾಜು, ಮುಖ್ಯಾಧಿಕಾರಿ ಮಲ್ಲೇಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೊಂಡೇಗೌಡ, ಕಾರ್ಯದರ್ಶಿ ಹೊನ್ನೂರು ಸೋಮಣ್ಣ, ನಂಜುಂಡೇಗೌಡ, ಗಡಿ ಯಜಮಾನರಾದ ರಮೇಶ್, ಶಿವನಂಜೇಗೌಡ, ನಾಗರಾಜು ಸೇರಿದಂತೆ ಅನೇಕರು ಹಾಜರಿದ್ದರು.