ಕಾರವಾರ: ಜಿಲ್ಲೆಯ ಒಬ್ಬ ವ್ಯಕ್ತಿಗೆ ಕರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ತಿಳಿಸಿದೆ. ಮಹಾರಾಷ್ಟ್ರ ಥಾಣೆಯಿಂದ ಆಗಮಿಸಿದ ಹಳಿಯಾಳ ಮುರ್ಕವಾಡದ ಮೂಲದ 35 ವರ್ಷದ ವ್ಯಕ್ತಿಗೆ (19ಕೆಡಬ್ಲ್ಯುಆರ್-126)ರೋಗ ಇರುವುದು ದೃಢಪಟ್ಟಿದೆ. ಅವರ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ. 9 ದಿನದ ಕ್ವಾರಂಟೈನ್ ಮುಗಿಸಿದ ವ್ಯಕ್ತಿ ಗುರುವಾರ ಮನೆಗೆ ತೆರಳಿದ್ದ ಎನ್ನಲಾಗಿದೆ. ದುಬೈನಿಂದ ಆಗಮಿಸಿದ ಭಟ್ಕಳದ 36 ವರ್ಷದ ಮಹಿಳೆಗೆ, ಮುಂಬೈನಿಂದ ಆಗಮಿಸಿದ ಭಟ್ಕಳದ 24 ಹಾಗೂ 45 ವರ್ಷದ ಪುರುಷರಿಬ್ಬರಿಗೆ ಹಾಗೂ ಕುಮಟಾದ ಒಬ್ಬನಲ್ಲಿ ರೋಗ ಕಂಡಿಬಂದಿದೆ. ಹೆಲ್ತ್ ಬುಲೆಟಿನ್ನಲ್ಲಿ ಇವರ ವಿವರಗಳು ಪ್ರಕಟವಾಗಬೇಕಿವೆ.
ಕ್ವಾರಂಟೈನ್ನಲ್ಲಿ ಹೈಡ್ರಾಮಾ
ಕುಮಟಾ: ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಧಾರವಾಡ ಮೂಲದ ವ್ಯಕ್ತಿಯೊಬ್ಬ ಶುಕ್ರವಾರ ವಿಚಿತ್ರವಾಗಿ ವರ್ತಿಸಿ ತಾಲೂಕು ಆಡಳಿತದ ಅಧಿಕಾರಿಗಳು ತಬ್ಬಿಬ್ಬಾಗುವಂತೆ ಮಾಡಿದ ಘಟನೆ ನಡೆದಿದೆ.
ವ್ಯಕ್ತಿ ತನಗೆ ಹೃದಯಾಘಾತವಾಗಿದೆ ಎಂದು ಹೈಡ್ರಾಮಾ ನಡೆಸಿದ್ದ ಎನ್ನಲಾಗಿದೆ. ಕೇಂದ್ರದ ಸಿಬ್ಬಂದಿ ಆತಂಕಗೊಂಡಿದ್ದರು. ದೂರದಿಂದಲೇ ಜನ ನಿಂತು ನೋಡಲಾರಂಭಿಸಿದರು. ವೈದ್ಯರು ಬಂತು ತಪಾಸಣೆ ನಡೆಸಿ ಆತ ಆರೋಗ್ಯವಾಗಿದ್ದಾನೆ ಎಂಬುದನ್ನು ಖಚಿತ ಮಾಡಿದ್ದಾರೆ.
ಆಗಿದ್ದೇನು?: ಮೀರಜ್ನಿಂದ ಕುಮಟಾಗೆ ಬಂದಿಳಿದಿದ್ದ ವ್ಯಕ್ತಿ ಧಾರವಾಡದ ತನ್ನ ನಿವಾಸಕ್ಕೆ ಹೋಗಬೇಕಿತ್ತು. ಆದರೆ, ಸ್ವಂತ ಊರಿನವರು ಆತನನ್ನು ಒಳಗೆ ಸೇರಿಸಲು ಸಿದ್ಧರಿರಲಿಲ್ಲ. ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಆತನನ್ನು ಕುಮಟಾದಲ್ಲಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಿದ್ದಾರೆ. ಅತ್ತ ಮೀರಜ್ನಲ್ಲೂ ಇರಲಾರದೇ ಇತ್ತ ಊರಿಗೂ ತೆರಳಲಾರದೇ ತ್ರಿಶಂಕು ಸ್ಥಿತಿಯಲ್ಲಿದ್ದ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಹೃದಯಾಘಾತವಾದಂತೆ ನಾಟಕವಾಡಿದ್ದ ಎಂದು ಕೇಂದ್ರದಲ್ಲಿದ್ದವರು ಮಾಹಿತಿ ನೀಡಿದ್ದಾರೆ.