ಚಿಕ್ಕಮಗಳೂರು: ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಸಂಗೀತ ಐದರಿಂದ 50 ವರ್ಷದವರೆಗೂ ಕಲಿಯಬಹುದಾದ ವಿದ್ಯೆ. ಏಕಾಗ್ರತೆ ಸಾಧಿಸಲು, ನೆಮ್ಮದಿಗೆ ಸಂಗೀತ ಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಹೇಳಿದರು. ನಗರದ ಜೆವಿಎಸ್ ಕಾಲೇಜಿನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಮೃತಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನನ್ನ ಬಾಲ್ಯದಲ್ಲಿ ಅಲ್ಪಕಾಲ ಕಲಿಸಿದ ಗುರುಗಳ ನೆನಪು ಮಸುಕಾಗಿದ್ದರೂ ಅವರು ಕಲಿಸಿದ ಎರಡು ಹಾಡುಗಳು ಇಂದಿಗೂ ನನಗೆ ನೆನಪಿದೆ. ವಿದ್ಯೆ ಎಂದಿಗೂ ಶಾಶ್ವತ. ಹಳೇ ಬೇರು ಹೊಸ ಚಿಗುರು ಎಂಬ ಕಗ್ಗದ ಕವಿವಾಣಿಯನ್ನು ಉದಾಹರಿಸಿ ಇಂದಿನ ತಂತ್ರಜ್ಞಾನದ ಸದ್ಬಳಕೆಯಿಂದಲೂ ಕಲಿಯಬಹುದು. ಆದರೆ ದೊಡ್ಡ ವೇದಿಕೆಗಳು, ಮನ್ನಣೆಯ ದಾಹವನ್ನು ಬಿಡಬೇಕು. ಶ್ರದ್ಧೆಯಿಂದ ಕಲಿತರೆ ಸಕಲವೂ ಸಿಗುತ್ತದೆ ಎಂದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ ಮಾತನಾಡಿ, ಉತ್ತಮ ಸಂಸ್ಕಾರ ಬೆಳೆಸುವ ಕಲೆ, ಸಂಸ್ಕೃತಿ ಉಳಿಸುವ ಕೆಲಸಕ್ಕೆ ಯಾವಾಗಲೂ ಸಂಸ್ಥೆ ಸಹಕಾರ ನೀಡಲಿದೆ ಎಂದು ಹೇಳಿದರು.
ಅಕಾಡೆಮಿ ಸದಸ್ಯೆ ರೇಖಾ ಪ್ರೇಮಕುಮಾರ್ ಮಾತನಾಡಿ, ಇತ್ತೀಚೆಗೆ ನಮ್ಮನ್ನಗಲಿದ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣಅವರಿಗೆ ಈ ಶಿಬಿರವನ್ನು ಅರ್ಪಣೆ ಮಾಡುತ್ತಿದ್ದು, ನಾಡಿನ ಹಿರಿಯ ಕವಿಗಳ ಹಾಡುಗಳನ್ನು ಕಲಿಸಲಾಗುತ್ತಿದೆ ಎಂದರು.