ಹುಬ್ಬಳ್ಳಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಅಭಿವೃದ್ಧಿ ಮಂಡಳಿ ರಚನೆ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಹೆಸರು ಇಡುವಂತೆ ಆಗ್ರಹಿಸಿ ಎಸ್ಎಸ್ಕೆ ಸಮಾಜ ಚಿಂತನ-ಮಂಥನ ಸಮಿತಿ ನೇತೃತ್ವದಲ್ಲಿ ಸಮಾಜದ ಮುಖಂಡರು ನಗರದ ಮಿನಿ ವಿಧಾನಸೌಧದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಹಿಂದುಳಿದ 2 ಎ ವರ್ಗಕ್ಕೆ ಸೇರಿದ ಎಸ್ಎಸ್ಕೆ ಸಮುದಾಯದವರು ಬಿಜೆಪಿಗೆ ಬೆಂಬಲಿಸುತ್ತ ಬಂದಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಮಾಜದ ಕುಲ ಪುರುಷ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರು ಹೆಸರು ನಾಮಕರಣ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
ಈ ಸಮಾಜವು ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿದ್ದಾರೆ. ಸಾಕಷ್ಟು ಯುವತಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಸಮಾಜದ ಅಭಿವೃದ್ಧಿಗೆ ಮಂಡಳಿ ರಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರರ ಮುಖಾಂತರ ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಸಮಿತಿಯ ಹನುಮಂತಸಾ ನಿರಂಜನ, ಟಿ.ಎಂ. ಮೆಹರವಾಡೆ, ಆನಂದ ಬದ್ದಿ, ರಮೇಶ ಪೂಜಾರಿ, ಶ್ರೀಕಾಂತ ಹಬೀಬ, ದೀಪಕ ಮೆಹರವಾಡೆ, ಅಮೃತಾ ದಾನಿ, ರಾಜಶ್ರೀ ಜಡಿ, ಪುಷ್ಪಾ ಪವಾರ ಹಾಗೂ ಇತರರು ಪಾಲ್ಗೊಂಡಿದ್ದರು.