ಗುಂಡ್ಲುಪೇಟೆ: ಸರ್ಕಾರ ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಾತಿ ಹೆಚ್ಚಳ ಸೇರಿದಂತೆ ನಾನಾ ರೀತಿಯ ಸವಲತ್ತುಗಳನ್ನು ನೀಡುತ್ತಿದೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.
ತಾಲೂಕಿನ ಬೊಮ್ಮಲಾಪುರ ಗ್ರಾಮ ಪಂಚಾಯಿತಿ ವತಿಯಿಂದ ವಸತಿ ಯೋಜನೆಯ ಎಸ್.ಟಿ. ವರ್ಗದ ಫಲಾನುಭವಿಗಳಿಗೆ ನಿವೇಶನಗಳ ಇ-ಸ್ವತ್ತು ಪತ್ರಗಳನ್ನು ವಿತರಿಸಿ ಮಾತನಾಡಿ, ಶಾಸಕರಾಗಿ ಆಯ್ಕೆಯಾದ ನಂತರ ಪರಿಶಿಷ್ಟ ಜಾತಿ/ವರ್ಗದ ಜನರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು.
ಎಸ್ಟಿ ವರ್ಗದವರೇ ಹೆಚ್ಚಾಗಿರುವ ಬೊಮ್ಮಲಾಪುರಕ್ಕೆ 80 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಕೊಡಸೋಗೆ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚ, ತೆರಕಣಾಂಬಿ ಗ್ರಾಮದಲ್ಲಿ 2 ಕೋಟಿ ರೂ., ಬೇರಂಬಾಡಿ ಗ್ರಾಮದಲ್ಲಿ 1.5 ಕೋಟಿ ರೂ. ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗಿದೆ. ಹಿಂದೆ ಇದ್ದವರು ನಿವೇಶನ ಗುರುತಿಸದೆಯೇ 1994ರಲ್ಲಿಯೇ ಎಸ್ಟಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದರು. ಇದರಿಂದ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ತಾವು ಆಸಕ್ತಿ ವಹಿಸಿದ ಪರಿಣಾಮ ನಿವೇಶನ ಗುರ್ತಿಸಿ ವಿತರಣೆ ಮಾಡಲಾಗುತ್ತಿದೆ. ಆದ್ದರಿಂದ ಈ ಹಿಂದೆ ಅಧಿಕಾರದಲ್ಲಿದ್ದವರಿಗೂ ತಾವು ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ತುಲನೆ ಮಾಡಿ ಎಂದು ಹೇಳಿದರು.
ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ಹಿಂದೆ ನಮ್ಮ ಜನಾಂಗಕ್ಕೆ ಯಾವುದೇ ಸರ್ಕಾರಗಳೂ ಮಾಡದ ಕೆಲಸಗಳು ಹಾಗೂ ನೆರವನ್ನು ಬಿಜೆಪಿ ಸರ್ಕಾರ ಮಾಡಿದೆ. 30 ವರ್ಷಗಳಿಂದ ಬರೀ ಹಕ್ಕುಪತ್ರ ಇಟ್ಟುಕೊಂಡಿದ್ದವರಿಗೆ ನಿರಂಜನಕುಮಾರ್ ನಿವೇಶನ ಹಾಗೂ ಇ-ಸ್ವತ್ತು ಪತ್ರ ವಿತರಿಸಿದ್ದಾರೆ. ಇನ್ನೂ ಹೆಚ್ಚಿನ ಕೆಲಸ ಮಾಡುವ ಸಲುವಾಗಿ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದಸ್ವಾಮಿ, ಬಗರ್ಹುಕುಂ ಸಮಿತಿಯ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಮಹೇಶ್, ಪುರಸಭೆ ಅಧ್ಯಕ್ಷ ಪಿ. ಗಿರೀಶ್, ಎಪಿಎಂಸಿ ಅಧ್ಯಕ್ಷ ರವಿ, ರಾಜ್ಯ ಎಸ್ಟಿ ಮೊರ್ಚಾ ಉಪಾಧ್ಯಕ್ಷ ಎನ್. ಮಲ್ಲೇಶ್ ಸೇರಿದಂತೆ ಹಲವರು ಇದ್ದರು.
.