ಪಾಂಡವಪುರ: ತಾಲೂಕಿನ ಚಿನಕುರಳಿಯ ಎಸ್ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜಿ-20 ಶೃಂಗಸಭೆಯ ಘೋಷವಾಕ್ಯವಾದ ವಸುದೈವ ಕುಟುಂಬಕಂ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ವಿವಿಧ ವಿಭಾಗಗಳಿಂದ ರಸಪ್ರಶ್ನೆ, ಚರ್ಚಾಸ್ಪರ್ಧೆ, ಉಪನ್ಯಾಸ, ಪೆನ್ಸಿಲ್ ಸ್ಕೆಚ್ ನಂತಹ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಎಸ್ಟಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಆಧಿಕಾರಿ ನಿವೇದಿತಾ ನಾಗೇಶ್ ಉದ್ಘಾಟಿಸಿ ಮಾತನಾಡಿ, ಆಧುನಿಕ ಪ್ರಪಂಚದಲ್ಲಿ ದಿನನಿತ್ಯ ಸಾಕಷ್ಟು ತೊಂದರೆಗಳಿವೆ. ಇಂತಹ ತೊಂದರೆಗಳಿಗೆ ಪರಿಹಾರವನ್ನು ನಾವುಗಳೇ ಹುಡುಕಿಕೊಳ್ಳಬೇಕು. ಸರ್ಕಾರದ ವಿಚಾರಗಳು ಮತ್ತು ಯೋಜನೆಗಳು ಪ್ರತಿಯೊಬ್ಬ ನಾಗರಿಕನಿಗೂ ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯವು ಎಚ್ಚೆತ್ತುಕೊಳ್ಳಬೇಕು. ಇಂತಹ ದಿನಗಳನ್ನು ಕೇವಲ ಆಚರಣೆಗೆ ತರದೆ ಕಾರ್ಯ ರೂಪಕ್ಕೂ ತಂದು ಸಾಮುದಾಯಿಕ ಬದಲಾವಣೆಯನ್ನು ತರಬೇಕಿದೆ. ಯುವಕರು ರಾಷ್ಟ್ರದ ಉನ್ನತೀಕರಣಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಉಪಪ್ರಾಂಶುಪಾಲ ಡಾ. ನಿಶಾಂತ್ ಎ.ನಾಯ್ಡು ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಜಿ-20 ಕಾರ್ಯಕ್ರಮ ಭಾರತದಲ್ಲಿ ನಡೆಯುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಗ್ಗಳಿಕೆಯ ವಿಚಾರವಾಗಿದೆ. ಇಡೀ ವಿಶ್ವವೇ ನಮ್ಮನ್ನು ತಿರುಗಿ ನೋಡುವಂತಹ ಹೆಚ್ಚುಗಾರಿಕೆ ನಮ್ಮದಾಗಿದೆ. ದೇಶದ ಆರ್ಥಿಕತೆ, ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರ ಹಾಗೂ ಜಿಡಿಪಿಯನ್ನು ಒಳಗೊಂಡಂತೆ ಇನ್ನು ಹತ್ತಾರು ವಿಷಯಗಳನ್ನು ಈ ಕಾರ್ಯಕ್ರಮದಲ್ಲಿ ಕಾಣಬಹುದು. ಇಂತಹ ಚರ್ಚೆ ಕೇವಲ ಒಂದು ಸಭೆಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಜವಾಬ್ದಾರಿಯುತವಾಗಿ ಅನುಸರಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಕೀರ್ತನಾ, ತನ್ಜೀಯ ಕೌಸರ್, ವಿದ್ಯಾರ್ಥಿಗಳಾದ ಮೋನಿಷಾ, ಬಿ.ವಿ.ದರ್ಶನ್, ಮಾನಸಾ ಇತರರು ಇದ್ದರು.
ಜಿ-20 ಕಾರ್ಯಕ್ರಮದ ಅಂಗವಾಗಿ ಕನ್ನಡ ವಿಭಾಗದಿಂದ ಚರ್ಚಾ ಸ್ಪರ್ಧೆ, ಅರ್ಥಶಾಸ್ತ್ರ ವಿಭಾಗದಿಂದ ಉಪನ್ಯಾಸ, ಇತಿಹಾಸ ವಿಭಾಗದಿಂದ ಪೆನ್ಸಿಲ್ ಸ್ಕೆಚ್, ರಾಜ್ಯಶಾಸ್ತ್ರ ವಿಭಾಗದಿಂದ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.