ಬಾಗಲಕೋಟೆ: ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ ಸಾವಿನ ಪ್ರಕರಣ ಕುರಿತು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ತನಿಖೆ ವರದಿ ಬಳಿಕ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಜಿಲ್ಲೆಯ ಕೂಡಲಸಂಗಮದಲ್ಲಿ ಶುಕ್ರವಾರ ಐಕ್ಯ ಮಂಟಪ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ ಪುತ್ರ ಕಾಣೆಯಾದ ಮರುದಿನ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದರು. ಮೂರು ನಾಲ್ಕು ಪೊಲೀಸರು ಪತ್ತೆ ಹಚ್ಚುವ ಕೆಲಸ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ ಕಾರು, ಮೃತದೇಹ ಪತ್ತೆಯಾಗಿದೆ. ಸಾವು ಯಾವ ರೀತಿಯಾಗಿದೆ? ಅಪಘಾತವೋ, ಕೊಲೆಯೋ? ಎನ್ನುವ ಕುರಿತು ಕಂಡು ಹಿಡಿಯುವ ಎಲ್ಲ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ರೇಣುಕಾಚಾರ್ಯರ ಅವರು ನಮ್ಮ ಸರ್ಕಾರ ಭಾಗವಾಗಿದ್ದು, ಮಾಜಿ ಸಚಿವರು, ಹಾಲಿ ಶಾಸಕರು ಇದ್ದಾರೆ. ಹೀಗಾಗಿ ಈ ಪ್ರಕರಣವನ್ನು ವಿಶೇಷ ಗಮನ ವಹಿಸಲಾಗಿದೆ. ಈಗಾಗಲೇ ಎಡಿಜಿಪಿ ಅಲೋಕಕುಮಾರ ಹಾಗೂ ಅಧಿಕಾರಿಗಳು ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ. ಈಗಲೇ ಪ್ರಾಥಮಿಕ ಮಾಹಿತಿ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.