ನಿಪ್ಪಾಣಿ: ಪಕ್ಷ ಭೇದ-ಭಾವ ಮರೆತು ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾದಲ್ಲಿ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ತಾಲೂಕಿನ ಜತ್ರಾಟ ಗ್ರಾಮದಲ್ಲಿ ಮುಜರಾಯಿ ಇಲಾಖೆಯಡಿ 50 ಲಕ್ಷ ರೂ.ದಲ್ಲಿ ಸಿದ್ಧೇಶ್ವರ ಮಂದಿರದ ಸಾಂಸ್ಕೃತಿಕ ಭವನದ ಕಾಮಗಾರಿ, ಲೋಕೋಪಯೋಗಿ ಇಲಾಖೆಯಡಿ ಜತ್ರಾಟ ಗ್ರಾಮದಿಂದ ಭಿವಶಿ, ಸೌಂದಲಗಾ ಗ್ರಾಮಗಳವರೆಗೆ ಸುಮಾರು 4.50 ಕಿ.ಮೀ ವರೆಗಿನ 3 ಕೋಟಿ ರೂ. ಅನುದಾನದ ರಸ್ತೆ ಸುಧಾರಣೆ ಕಾಮಗಾರಿಗೆ, ಜಲಜೀವನ್ ಮಿಷನ್ ಯೋಜನೆಯಡಿ 2.72 ಕೋಟಿ ರೂ. ಅನುದಾನದಲ್ಲಿ 1,070 ಮನೆಗಳಿಗೆ ಶುದ್ಧ ಕುಡಿಯುವ ನೀರಿನ ನಳಮಾಪಕ ಅಳವಡಿಸುವ ಕಾಮಗಾರಿಗೆ, ಚರ್ಮಕಾರ ಭವನದಿಂದ ಲಕ್ಷ್ಮೀ ಮಂದಿರದವರೆಗೆ ಆರ್.ಡಿ.ಪಿ.ಆರ್ ಯೋಜನೆಯಡಿ 80 ಲಕ್ಷ ರೂ. ಅನುದಾನದಲ್ಲಿ ಸುಮಾರು 1.20 ಕಿ.ಮೀ ಉದ್ದದ ತೋಟಪಟ್ಟಿ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಿದ್ಧೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಎಷ್ಟೇ ವೆಚ್ಚವಾಗಲಿ ಅದನ್ನು ಪೂರ್ಣಗೊಳಿಸುವುದು ಜೊಲ್ಲೆ ಕುಟುಂಬದ ಜವಾಬ್ದಾರಿ. ಕರೊನಾ ಸಂದರ್ಭದಲ್ಲಿ ತಾಲೂಕಿನಲ್ಲಿ 4 ಕರೊನಾ ಸೆಂಟರ್ ಮಾಡಲಾಗಿತ್ತು. ಇಲ್ಲಿ 700ಕ್ಕೂ ಅಧಿಕ ರೋಗಿಗಳು ಉಚಿತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ತೆಗೆದುಕೊಂಡಿದ್ದ ನಿರ್ಧಾರದಿಂದ ದೇಶದಲ್ಲಿ ಕರೊನಾ ಹತೋಟಿಗೆ ಬಂದಿತು. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಫಲಾನುಭವಿಗಳ ಬಾಗಿಲಿಗೆ ತಲುಪಿಸಲಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಉದ್ದೇಶ ಎಂದರು.
ಜಿಪಂ ಮಾಜಿ ಸದಸ್ಯ ಸಿದ್ದು ನರಾಟೆ ಮಾತನಾಡಿ, ಸಚಿವೆ ಜೊಲ್ಲೆ ಅವರು ಆಡಳಿತಾವಧಿಯಲ್ಲಿ ಜತ್ರಾಟ ಗ್ರಾಪಂ ವ್ಯಾಪ್ತಿಯಲ್ಲಿ ಶಾಶ್ವತ ಕಾಮಗಾರಿಗಳು ಸೇರಿ 2013ರಿಂದ ಇಲ್ಲಿಯವರೆಗೆ ಸುಮಾರು 250 ರೂ. ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಾಗಿವೆ. ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜೊಲ್ಲೆ ದಂಪತಿ ಶ್ರಮ ಶ್ಲಾಘನೀಯವಾದದ್ದು ಎಂದರು.
ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಲಗೊಂಡ ಪಾಟೀಲ, ರಮೇಶ ಭಿವಶೆ, ಶ್ರೀಧರ ಮಹಾರಾಜರು, ಆನಂದ ಯಾದವ ಮಾತನಾಡಿದರು.
ಹಾಲಶುಗರ್ಸ್ ಕಾರ್ಖಾನೆ ಸಂಚಾಲಕ ಆರ್.ವೈ.ಪಾಟೀಲ, ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ಸಾಗರ ಪಾಟೀಲ, ಗ್ರಾಪಂ ಅಧ್ಯಕ್ಷ ಶಿವಾಜಿ ರಾನಮಳೆ, ಪಿಎಲ್ಡಿ ಬ್ಯಾಂಕ್ ಚೇರ್ಮನ್ ಎಸ್.ಎಸ್.ಢವನೆ, ದಿಲೀಪ ಚವಾಣ, ದಸ್ತಗೀರ್ ಮುಜಾವರ್, ಗಣಿ ಮುಜಾವರ್, ಸವಿತಾ ಖೋಕಾಟೆ, ಬಿಸ್ಮಿಲ್ಲಾ ಮುಜಾವರ್ ಇತರರಿದ್ದರು.
30 ವರ್ಷಗಳಲ್ಲಿ ಆಗದ ಕೆಲಸಗಳನ್ನು ಕೇವಲ 10 ವರ್ಷಗಳಲ್ಲಿ ಮಾಡಿ ತೋರಿಸಿದ್ದೇವೆ.
| ಅಣ್ಣಾಸಾಹೇಬ ಜೊಲ್ಲೆ ಸಂಸದ