ದಾವಣಗೆರೆ: ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಅವರ ಮನೆ ಮೇಲೆ ಎನ್ಐಎ ದಾಳಿ ನಡೆಸಿದ್ದನ್ನು ಖಂಡಿಸಿ ಎಸ್ಡಿಪಿಐ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಾಷಾ ನಗರದ ಸಂಘದ ಕಚೇರಿಯಿಂದ ಮದೀನಾ ಆಟೋ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ನಂತರ ಅಲ್ಲಿ ಬಹಿರಂಗ ಸಭೆ ನಡೆಸಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಜಬಿವುಲ್ಲಾ ಮಾತನಾಡಿ, ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಧ್ವನಿ ಎತ್ತಿದವರನ್ನು ಈಗಿನ ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇಡಿ, ಎನ್ಐಎ ದಾಳಿ ನಡೆಸಲಾಗುತ್ತಿದೆ. ರಿಯಾಜ್ ಮೇಲಿನ ದಾಳಿ, ನಮ್ಮ ಪಕ್ಷವನ್ನು ದುರ್ಬಲಗೊಳಿಸುವ ಅಥವಾ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಖಂಡಿಸಿದರು.
ಪ್ರವೀಣ್ ನೆಟ್ಟಾರು ಹತ್ಯೆಗೂ ಎಸ್ಡಿಪಿಐ ಗೂ ಯಾವುದೇ ಸಂಬಂಧವಿಲ್ಲ. ಎನ್.ಐ.ಎ ನಡೆಸುತ್ತಿರುವ ಸರ್ಕಾರಿ ಪ್ರಾಯೋಜಿತ ದಾಳಿಗಳ ಬಗ್ಗೆ ಸ್ವತಃ ಎನ್.ಐ.ಎ ಯ ಅಧಿಕೃತ ಹೇಳಿಕೆ ಹೊರಬರುವ ಮುನ್ನವೇ ಸಂಘಟನೆ ವಿರುದ್ಧ ಕೆಲವು ಮಾಧ್ಯಮಗಳು ಸತ್ಯಕ್ಕೆ ದೂರವಾದ ವರದಿಯನ್ನು ಪ್ರಕಟಿಸುತ್ತಿವೆ. ಸುಳ್ಳು ಪ್ರಕರಣಗಳ ಮೂಲಕ ಸಿಲುಕಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್, ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಕ್, ನಗರ ಸಮಿತಿ ಅಧ್ಯಕ್ಷ ಸೈಯದ್ ಸಿಕಂರ್ ಅಲಿ, ಮೌಸಿನ್, ಮೆಹಬೂಬ್ ಸುಬಾನಿ, ಎ.ಆರ್.ತಾಹೀರ್, ಫರೀದ್ ಇತರರಿದ್ದರು