ದಾವಣಗೆರೆ: ರಾಜ್ಯವ್ಯಾಪಿ ವಿವಿಧ ಯೋಜನೆಯಡಿಯ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗಾಗಿ ಎಚ್.ಕೆ. ರಾಮಚಂದ್ರಪ್ಪ ನಡೆಸಿದ ಹೋರಾಟಗಳು ಸ್ಮರಣೀಯ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಎಂ.ಬಿ.ಶಾರದಮ್ಮ ತಿಳಿಸಿದರು.
ನಗರದ ಜಯದೇವ ವೃತ್ತದ ಅಂಗನವಾಡಿ ಕಾರ್ಯಕರ್ತೆಯರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಮಿಕ ಮುಖಂಡ ಎಚ್. ಕೆ.ರಾಮಚಂದ್ರಪ್ಪ ಅವರ ಎರಡನೇ ವರ್ಷದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರ ಸಾಮಾಜಿಕ ಭದ್ರತೆಗಾಗಿ ರಾಜ್ಯ ಸಂಘವನ್ನು ಕಟ್ಟುವ ಜತೆಯಲ್ಲೇ ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲೂ ಸೌಲಭ್ಯ ಸಿಗುವಂತೆ ಮಾಡಿದ ರಾಮಚಂದ್ರಪ್ಪ, ಅಂಗನವಾಡಿ ಕಾರ್ಯಕರ್ತೆಯರು 12,500 ರೂ. ವೇತನ ಪಡೆಯಲು ಕಾರಣಿಕರ್ತರಾಗಿದ್ದರು. ಅವರೇ ಕಾರ್ಯಕರ್ತೆಯರಿಗೆ ದಾರಿದೀಪ. ಅವರ ದಾರಿಯಲ್ಲೇ ಚಳವಳಿ ರೂಪಿಸುತ್ತಿದ್ದೇವೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯ ಸಂಚಾಲಕ ಆವರಗೆರೆ ವಾಸು ಮಾತನಾಡಿ, ಶೋಷಿತರು, ಕಾರ್ಮಿಕ ವರ್ಗ, ದುಡಿಯುವ ವರ್ಗಕ್ಕೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವಲ್ಲಿ ಹಗಲಿರುಳು ಶ್ರಮಿಸಿದ ಧೀಮಂತ ವ್ಯಕ್ತಿ ರಾಮಚಂದ್ರಪ್ಪ. ಅವರ ತತ್ವಾದರ್ಶಗಳು ಹೋರಾಟಕ್ಕೆ ಬೆಳಕಾಗಿವೆ ಎಂದರು.