More

    ಉದ್ಯೋಗದ ಬುನಾದಿ ಕೌಶಲ

    ಬೆಳಗಾವಿ: ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಪರಿಶ್ರಮ, ಕೌಶಲಗಳು ಉದ್ಯೋಗಕ್ಕೆ ಬುನಾದಿಯಾಗಿವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ
    ಪ್ರೊ.ಶಿವಾನಂದ ಗೊರನಾಳೆ ಅಭಿಪ್ರಾಯಪಟ್ಟರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯಗಳ ವೃತ್ತಿ ಮಾರ್ಗದರ್ಶನ, ತರಬೇತಿ ಮತ್ತು ವಿದ್ಯಾರ್ಥಿ ಉದ್ಯೋಗ ಕೋಶಗಳು ಹಾಗೂ ಟಿಸಿಎಸ್ ಸಂಸ್ಥೆ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾಂಪಸ್ ನೇಮಕಾತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಕಾಲೀನ ಉದ್ಯೋಗದ ಮಾರುಕಟ್ಟೆಗಳಲ್ಲಿ ಅಭ್ಯರ್ಥಿಗಳ ಭಾಷಾ ಜ್ಞಾನ, ಮಾರುಕಟ್ಟೆ ಕೌಶಲಗಳು, ಸಂವಹನ, ಹೊಸತನದ ಹುಡುಕಾಟಗಳು ಮಾನದಂಡಗಳಾಗಿವೆ. ಅವುಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ವೃತ್ತಿ ಜೀವನದ ಕುರಿತು ನಾವೇ ನಿರ್ಧರಿಸಬೇಕು. ನಮ್ಮ ಜ್ಞಾನ, ಸಾಮರ್ಥ್ಯಕ್ಕೆ ತಕ್ಕಂತಹ ಉದ್ಯೋಗ ಆರಿಸಿಕೊಳ್ಳಬೇಕು. ಟಿಸಿಎಸ್ ದೇಶದ ಹೆಮ್ಮೆಯ ಸಂಸ್ಥೆ. ಈ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಬೇಕೆಂಬುದು ಎಲ್ಲರ ಬಯಕೆಯಾಗಿದೆ. ವಿದ್ಯಾರ್ಥಿಗಳು ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ವಿವಿಯ ವಿದ್ಯಾರ್ಥಿ ಉದ್ಯೋಗ ಕೋಶದ ಅಧಿಕಾರಿ ಡಾ. ಆರ್.ಎನ್. ಮನಗೂಳಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾಲಯವು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಿಕೊಡುವುದಕ್ಕೆ ನಿರಂತರವಾಗಿ ವೇದಿಕೆ ಒದಗಿಸುತ್ತಿದೆ. ಪ್ರತಿಭಾವಂತ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶ ಎಂದರು.
    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಸ್.ತೇರದಾಳ ಮಾತನಾಡಿ, ಕ್ಯಾಂಪಸ್ ನೇಮಕಾತಿಯು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ನೇಮಕಾತಿ ಕಂಪನಿಗಳಿಗೂ ಪ್ರಯೋಜನ ನೀಡುತ್ತದೆ. ಸಂಸ್ಥೆಗೆ ಉತ್ತಮ-ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇದು ಸೂಕ್ತವಾದ ಭೂಮಿಕೆಯಾಗಲಿದೆ. ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ವೃತ್ತಿಪರತೆಯ ಕೌಶಲಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಿದೆ ಎಂದರು. ಟಿಸಿಎಸ್ ಸಂಸ್ಥೆಯ ಎಚ್‌ಆರ್‌ಕಿರಣ ಎಂ. ಮತ್ತು ಗಿರೀಶ ಪ್ರಕಾಶ ಅವರು ಸಂಸ್ಥೆ ಮತ್ತು ನೇಮಕಾತಿ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.

    ಡಾ.ಮುಕುಂದ ಮುಂಡರಗಿ ಸ್ವಾಗತಿಸಿದರು. ವಿದ್ಯಾರ್ಥಿ ಲಕ್ಷ್ಮಣ ನಾಯ್ಕ ಪ್ರಾರ್ಥಿಸಿದರು. ಡಾ.ಜ್ಯೋತಿ ಪಾಟೀಲ ನಿರೂಪಿಸಿದರು. ಉಪನ್ಯಾಸಕ ವಿನೂತ ವಡಗಾವಿ ವಂದಿಸಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿ ಉದ್ಯೋಗ ಕೋಶದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts