ಶಿರಾಳಕೊಪ್ಪ: ದ್ವಿತೀಯ ಮೃತ್ತಿಕಾ ಮಂತ್ರಾಲಯವೆಂದೇ ಪ್ರಸಿದ್ಧಗೊಂಡಿರುವ ಉಡಗಣಿ ರಾಘವೇಂದ್ರ ಸ್ವಾಮಿಗಳ ರಥೋತ್ಸವ ಭಾನುವಾರ ಅತ್ಯಂತ ಸಡಗರದಿಂದ ನೆರವೇರಿತು. ರಾಯರ ಆರಾಧನಾ ಮಹೋತ್ಸವ ನಿಮಿತ್ತ ಶುಕ್ರವಾರದಿಂದ ಭಾನುವಾರದವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.
ಶುಕ್ರವಾರ ಪ್ರಥಮಾರಾಧನೆ, ಶನಿವಾರ ಪುಣ್ಯದಿನವಾಗಿದ್ದು ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಭಾನುವಾರ ಗುರುಗಳ ರಥೋತ್ಸವ ನಡೆಯಿತು. ಶಿರಾಳಕೊಪ್ಪ ಸೇರಿದಂತೆ ವಿವಿದ ಭಾಗಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ರಾಯರಿಗೆ ಜೈಕಾರ ಹಾಕುತ್ತಾ ತೇರನ್ನು ಎಳೆದರು. ಬ್ಯಾಂಡ್ಸೆಟ್, ಡೊಳ್ಳು ಕುಣಿತ ಸೇರಿದಂತೆ ವಾದ್ಯ ಮೇಳ ರಥೋತ್ಸವಕ್ಕೆ ಮತ್ತಷ್ಟು ಕಳೆ ತುಂಬಿದವು. ಭಕ್ತರು ಭಜನೆ ಹಾಗೂ ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು. ತೇರು ಮಠದ ಬೀದಿಯ ಕೊನೆಯಲ್ಲಿ ಇರುವ ವರದಾಂಜನೇಯ ಸ್ವಾಮಿ ದೇವಾಲಯದವರೆಗೆ ಸಾಗಿ ಪುನಃ ಮಠಕ್ಕೆ ಆಗಮಿಸಿತು. ವಕೀಲರಾದ ವಸಂತಮಾಧವ, ವೇದಮೂರ್ತಿ, ಶಶಿಧರ್ ರವಿ, ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಇತರರಿದ್ದರು. ಸೋಮವಾರ ಪವಮಾನಹೋಮದೊಂದಿಗೆ ಆರಾಧನಾ ಮಹೋತ್ಸವ ಮುಕ್ತಾಯವಾಗಲಿದೆ.