ಮಡಿಕೇರಿ: ನಾಪೋಕ್ಲು ಮೀಪದ ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್.ತಿಮ್ಮಯ್ಯ ಅಕಾಡೆಮಿ ಫಾರ್ ಸ್ಫೋರ್ಟ್ಸ್ ಆ್ಯಂಡ್ ಗೇಮ್ಸ್ ವತಿಯಿಂದ ಆಯೋಜಿಸಿರುವ 12ನೇ ವರ್ಷದ ಉಚಿತ ಹಾಕಿ ಬೇಸಿಗೆ ಶಿಬಿರವನ್ನು ಶನಿವಾರ ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾಪಟು ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ಉದ್ಘಾಟಿಸಿದರು.
ಪ್ರತಿದಿನ ಬೆಳಗ್ಗೆ 7ರಿಂದ 9 ಗಂಟೆಯವರೆಗೆ ನಡೆಯುವ ಈ ಹಾಕಿ ತರಬೇತಿ ಶಿಬಿರ ಆಯೋಜಿಸಿದ್ದು, ಆಸಕ್ತ ಕ್ರೀಡಾಪಟುಗಳು ಭಾಗವಹಿಸಬಹುದು. ಕ್ರೀಡೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ. ಕ್ರೀಡೆಯನ್ನು ಕೇವಲ ಮನೋರಂಜನೆಗಾಗಿ ಎಂದು ಪರಿಗಣಿಸದೆ ಪೂರ್ಣಕಾಲಿಕ ಉದ್ಯೋಗವಾಗಿಸಿಕೊಂಡರೆ ಜೀವನದಲ್ಲಿ ಮುಂದೆ ಬರಬಹುದು ಎಂದು ಸೋಮಣ್ಣ ಕಿವಿಮಾತು ಹೇಳಿದರು.
ಜನರಲ್ ಕೆ.ಎಸ್. ತಿಮ್ಮಯ್ಯ ಅಕಾಡೆಮಿ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ನಿರ್ದೇಶಕರಾದ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಮೂಡೇರ ಕಾಳಯ್ಯ, ತರಬೇತುದಾರರು, ಶಿಕ್ಷಕರು ಹಾಗೂ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.