ಲಕ್ಷೆ್ಮೕಶ್ವರ: ಪಟ್ಟಣದ ಇಟ್ಟಿಕೆರೆ ಪ್ರದೇಶವನ್ನು ಶನಿವಾರ ಪಂಚಾಯತ್ರಾಜ್ ಇಲಾಖೆ, ಭೂ ದಾಖಲೆ ಮತ್ತು ಭೂ ಸರ್ವೆಕ್ಷಣಾ ಇಲಾಖೆ ಅಧಿಕಾರಿಗಳು ಅಳತೆ ಮಾಡಿ ಹದ್ದು ಬಸ್ತ್ ಗುರುತಿಸಿ ಒತ್ತುವರಿ ಗುರುತು ಮಾಡಿದರು.
ಇಟ್ಟಿಕೆರೆ ತುಂಬಿರುವುದರಿಂದ ಕೆರೆಯಂಚಿನ ಪ್ರದೇಶದ ಕೆಲ ಮನೆಗಳು ಜಲಾವೃತಗೊಂಡಿವೆ. ಕೋಡಿಯಿಂದ ಕೆರೆ ಕೆಳಗಡೆಯ ಕೆಲ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಈ ಪ್ರದೇಶವನ್ನು ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಕೇಂದ್ರ ಅಧ್ಯಯನ ತಂಡವೂ ಪರಿಶೀಲಿಸಿತ್ತು. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಅವರು ಸಂಬಂಧಪಟ್ಟ ಅಧಿಕಾರಿಗಳ ಸಮಿತಿ ರಚಿಸಿ ಸಮಗ್ರ ವರದಿ ಸಲ್ಲಿಸುವಂತೆ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ಪಂಚಾಯತ್ರಾಜ್ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಶಿವನಗೌಡ ಗೌಡರ, ಭೂ-ದಾಖಲೆಗಳ ಸಹಾಯಕ ನಿರ್ದೇಶಕ ಬಿ.ಎನ್. ನಟರಾಜ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಶ್ರೀಧರ ತಳವಾರ ಮತ್ತು ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಇಟ್ಟಿಕೆರೆಯ ಮೂಲ, ಒತ್ತುವರಿ, ನೀರಿನ ಹರಿವು, ಕೋಡಿ ಮಾರ್ಗ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಆಗುತ್ತಿರುವ ಹಾನಿಗಳ ಬಗ್ಗೆ ಪರಿಶೀಲಿಸಿದರು.
ಬೆಳಿಗ್ಗೆಯಿಂದ ಸಂಜೆವರೆಗೂ ಕೆರೆಯ ಸುತ್ತಮುತ್ತಲಿನ ಎಲ್ಲ ಪ್ರದೇಶಗಳಿಗೆ ಸಂಚರಿಸಿ ವಿವಿಧ ಆಯಾಮಗಳಲ್ಲಿ ಕೆರೆ ಪ್ರದೇಶ ಸರ್ವೆ ಮಾಡಿದರು. ಕೆರೆ ಅಳತೆಗೆ ಆಗಮಿಸಿದ ಅಧಿಕಾರಿಗಳು ಯಾವುದೇ ಮಾಹಿತಿ-ಸುಳಿವು ನೀಡದೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.