More

    ಇಂಜಿನಿಯರ್​ಗೆ ನೆರವಾದ ನರೇಗಾ

    ಗದಗ: ಆತ ಬಡತನದಲ್ಲಿ ನೊಂದು, ಬೆಂದು ಅರಳಿದ ಪ್ರತಿಭೆ. ಬಡತನದಲ್ಲಿಯೇ ಇಂಜಿನಿಯರಿಂಗ್ ಪದವಿ ಪೂರೈಸಿ ಹೆತ್ತವರ ಆಸೆ ಈಡೇರಿಸಲು ನೂರೆಂಟು ಕನಸುಗಳ ಮೂಟೆ ಹೊತ್ತು ಮಹಾನಗರಿ ಬೆಂಗಳೂರಿಗೆ ಕಾಲಿಟ್ಟಿದ್ದ. ನಿರೀಕ್ಷೆಯಂತೆ ಖಾಸಗಿ ಕಂಪನಿಯಲ್ಲಿ ಕೆಲಸವನ್ನೂ ಗಿಟ್ಟಿಸಿದ್ದ. ಇನ್ನೇನು ಬದುಕು ರೂಪಿಸಿಕೊಳ್ಳಬೇಕು ಎನ್ನುವ ಸಮಯಕ್ಕೆ ಮಹಾಮಾರಿ ಕರೊನಾದಿಂದ ಕಂಪನಿ ಬಾಗಿಲು ಮುಚ್ಚಿತು. ಕೆಲಸ ಕಳೆದುಕೊಂಡು ಊರಿಗೆ ಮರಳಿದ ಇಂಜಿನಿಯರಿಂಗ್ ಪದವೀಧರ ಸ್ವಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾನೆ.

    ಗದಗ ತಾಲೂಕಿನ ಕದಡಿ ಗ್ರಾಮದ ಸದಾನಂದ ಕುರುಗೋಡಪ್ಪ ಮುಕ್ಕಣ್ಣವರ ಎಂಬ ಯುವ ಇಂಜಿನಿಯರ್​ನ ಸದ್ಯದ ಸ್ಥಿತಿ ಇದು. ಮೂಲತಃ ರೈತ ಕುಟುಂಬದ ಸದಾನಂದನಿಗೆ ತಂದೆ-ತಾಯಿ ಮತ್ತು ಒಬ್ಬ ಸಹೋದರ ಇದ್ದಾರೆ. ಸಹೋದರ ಕೂಡ ಬಿಇ ಪದವೀಧರ. ಸದಾನಂದ 2015ರಲ್ಲಿ ಧಾರವಾಡದ ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಇಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದ. ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮೆಂಟೇನನ್ಸ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ, ಲಾಕ್​ಡೌನ್​ನಿಂದಾಗಿ ಕಂಪನಿ ಬಾಗಿಲು ಮುಚ್ಚಿದೆ. ಬಡ ಕುಟುಂಬಕ್ಕೆ ಆಸರೆಯಾಗಿದ್ದ ಸದಾನಂದನ ಕೆಲಸವನ್ನು ಕರೊನಾ ಕೆಲಸ ಕಸಿದುಕೊಂಡಿದ್ದರಿಂದ ಆಕಾಶವೇ ಕಳಚಿ ಬಿದ್ದಂತಾಗಿದೆ.

    ಊರಿಗೆ ಬಂದು ಎರಡು ತಿಂಗಳವಾಗಿದ್ದು, ಬಿಇ ಗ್ರ್ಯಾಜುಯೇಟ್ ಎಂದುಕೊಂಡು ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ತಮ್ಮ ಜಮೀನಿನ ಕೆಲಸಕ್ಕೆ ಬೇರೆಯವರನ್ನೂ ಕೂಲಿ ಮಾಡಿಸದೆದ ತಾನೇ ಕೆಲಸ ಮಾಡಿದ್ದಾನೆ. ಅಷ್ಟೇ ಅಲ್ಲ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಕೂಡ ಮಾಡುತ್ತಿದ್ದಾನೆ. ಬೆಳಗ್ಗೆ 6 ಗಂಟೆಗೆ ಗ್ರಾಮ ಪಂಚಾಯಿತಿ ವತಿಯಿಂದ ಜಮೀನುಗಳ ಬದುವು ನಿರ್ವಣಕ್ಕೆ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ನಡೆದಿದೆ. ಈ ಕಾರ್ಯದಲ್ಲಿ ಬಿಇ ಇಂಜಿನಿಯರ್ ಸದಾನಂದ ಕೂಡ ತನ್ನ ತಾಯಿ ಜತೆ ಕೂಲಿ ಮಾಡುತ್ತಿದ್ದಾನೆ.

    ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್ ಹೇರಿದ್ದರಿಂದ ಕಂಪನಿ ಬಾಗಿಲು ಮುಚ್ಚಿತು. ಕೆಲಸ ಇಲ್ಲದೆ ಬೆಂಗಳೂರಿನಲ್ಲಿ ಬದುಕುವುದು ಕಷ್ಟ. ಹೀಗಾಗಿ ಲಾಕ್​ಡೌನ್ ಘೊಷಣೆಯಾದ ಕೂಡಲೇ ಊರಿಗೆ ಮರಳಿದೆ. ಮನೆಯಲ್ಲಿ ಎಷ್ಟು ದಿನ ಖಾಲಿ ಕುಳಿತುಕೊಳ್ಳುವುದು. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದೇನೆ.

    ಸದಾನಂದ ಮುಕ್ಕಣ್ಣವರ, ಇಂಜಿನಿಯರಿಂಗ್ ಪದವೀಧರ

    ಮಗ ಸಾಗಹೇಬ ಆಗಬೇಕು!

    ಲಾಕ್​ಡೌನ್​ನಿಂದ ಕೆಲಸ ಇಲ್ಲ. ಕಂಪನಿ ಮತ್ತೆ ಯಾವಾಗ ಕೆಲಸಕ್ಕೆ ಕರೆಯುತ್ತದೆಯೋ ಗೊತ್ತಿಲ್ಲ. ವರ್ಕ್ ಫ್ರಾಮ್ ಹೋಂ ಸೌಲಭ್ಯ ಕೂಡ ನೀಡಿಲ್ಲ. ಮುಂದೇನು ಎಂದು ಚಿಂತೆ ಮಾಡದೆ ಯುವ ಇಂಜಿನಿಯರ್ ಕೂಲಿ ಕೆಲಸ ಮಾಡುತ್ತಿದ್ದಾನೆ. ಆದರೆ, ಸದಾನಂದನ ತಾಯಿಗೆ ಮಾತ್ರ ಇದು ಸುತಾರಾಂ ಇಷ್ಟವಿಲ್ಲ. ನನ್ನ ಮಗ ಇಂಜಿನಿಯರ್ ಆಗಬೇಕು. ದೊಡ್ಡ ಸಾಹೇಬ ಆಗಬೇಕು ಎಂಬ ಆಸೆ ಅವರದು. ಆದರೆ, ಏನು ಮಾಡುವುದು ಕರೊನಾ ನನ್ನ ಮಗನಿಗೆ ಈ ಪರಿಸ್ಥಿತಿ ತಂದಿಟ್ಟಿದೆ ನೋಡ್ರಿ ಎಂದು ಸದಾನಂದನ ತಾಯಿ ನೀಲಮ್ಮ ಅವರು ಸಂಕಟ ಪಡುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts