ವಿಜಯಪುರ: ಆಸ್ತಿ ಅಕ್ರಮ ಪರಭಾರೆಗೆ ಸಂಬಂಧಿಸಿದಂತೆ ಸಿಒಡಿ ತನಿಖೆ ನಡೆಸಲು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಗ್ರಹಿಸಿದರು.
ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿ ಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ವಿಜಯಪುರ ನಗರದಲ್ಲಿ ಈ ಹಿಂದೆ ಅನೇಕ ಆಸ್ತಿ ಪರಭಾರೆ ಮಾಡಲಾಗಿದೆ. ತನ್ನಿಮಿತ್ತ ಸಬ್ ರಜಿಸ್ಟಾರ್ ರನ್ನು ಬದಲಾವಣೆ ಮಾಡಲಾಗಿತ್ತು. ಇದೀಗ ಮತ್ತದೇ ಅಧಿಕಾರಿಯನ್ನು ಕರೆತಂದು ಮತ್ತದೇ ಕೃತ್ಯ ಮುಂದುವರಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಆಸ್ತಿ ಅವ್ಯವಹಾರ ಆಗಿದೆ. ಅನ್ಯ ಊರುಗಳಿಗೆ ಹೋಗಿ ನೆಲೆಸಿದವರನ್ನು ಗುರುತಿಸಿ ಅವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಲಾಗುತ್ತಿದೆ. ಇದರ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳು ಸಹ ಇವೆ ಎಂದು ಪಟ್ಟಣಶೆಟ್ಟಿ ತಿಳಿಸಿದರು.
ನೂರಾರು ಜನ ಇಂಥ ಕೃತ್ಯದಿಂದ ನೊಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೆಲವರು ಕೈಗೆ ಸಿಕ್ಕ ಷ್ಟು ಹಣ ಪಡೆದು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಯೇ ಇದೊಂದು ದೊಡ್ಡ ಜಾಲ ಇದ್ದು ಸಿಒಡಿ ತನಿಖೆ ಮಾಡಲು ಮತ್ತೊಮ್ಮೆ ಮುಖ್ಯಮಂತ್ರಿ ಗಳಿಗೆ ಮನವಿ ಮಾಡುವೆ ಎಂದರು.
ಭ್ರಷ್ಟಾಚಾರ ಮುಕ್ತ ಎಂದೆಲ್ಲಾ ಭಾಷಣ ಬಿಗಿಯುವ ರಾಜಕಾರಣಿಗಳು ಭ್ರಷ್ಟ ಅಧಿಕಾರಿಗಳನ್ನೇ ಮರಳಿ ತರುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮ ನಡೆದರೂ ಅದೇ ಅಧಿಕಾರಿಯನ್ನು ಮರಳಿ ಕರೆ ತರುವುದರ ಹಿಂದೆ ಎಲ್ಲರೂ ಶಾಮೀಲಾಗಿದ್ದಾರೆ ಎಂದು ಆಪಾದಿಸಿದರು.