ಸಿದ್ದಾಪುರ: ಕೋವಿಡ್- 19 ವಿರುದ್ಧದ ಹೋರಾಟಕ್ಕೆ ಅಗತ್ಯ ಇರುವಷ್ಟು ಸಂರಕ್ಷಣೆ ಸಾಮಗ್ರಿಗಳನ್ನು ನೀಡಬೇಕು, ಮಾಸಿಕ 12 ಸಾವಿರ ರೂ. ಗೌರವಧನ ಖಾತರಿಪಡಿಸಬೇಕು, ಕೋವಿಡ್-19ಗೆ ತುತ್ತಾದ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಮತ್ತು ಸಂಪೂರ್ಣ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ಆಶಾ ಕಾರ್ಯಕರ್ತೆಯರು ತಾಲೂಕು ವೈದ್ಯಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ 147 ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್-19 ಹಾಗೂ ಕೆಎಫ್ಡಿ ಕಾಯಿಲೆಗೆ ಸಂಬಂಧಿಸಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸರ್ಕಾರ ಸ್ಪಂದಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ತಾಲೂಕು ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಅವರಿಗೆ ಆಶಾ ಕಾರ್ಯಕರ್ತೆಯರ ಪರವಾಗಿ ಹಾಲಮ್ಮ ನಾಯ್ಕ ಹಾಗೂ ಇತರರು ಮನವಿ ಸಲ್ಲಿಸಿದರು.
ಪ್ರೋತ್ಸಾಹ ಧನ ವಿತರಣೆ
ಸಿದ್ದಾಪುರ: ತಾಲೂಕಿನ ನೆಲೆಮಾವು ಸೇವಾ ಸಹಕಾರಿ ಸಂಘದಿಂದ ಕರೊನಾ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸಂಘದ ವ್ಯಾಪ್ತಿಯ ಆರು ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ರೂ.ಗಳಂತೆ ಪ್ರೋತ್ಸಾಹ ಧನವನ್ನು ಸಂಘದ ಅಧ್ಯಕ್ಷ ಜಿ.ಬಿ. ಭಟ್ಟ ನೆಲೆಮಾವು ವಿತರಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ಕೆಡಿಸಿಸಿ ಬ್ಯಾಂಕ್ ಮೂಲಕ ಒಂದು ಲಕ್ಷ ರೂ.ಗಳ ದೇಣಿಗೆ ನೀಡಲಾಗಿದೆ ಎಂದು ಸಂಘದ ಮುಖ್ಯಕಾರ್ಯನಿರ್ವಾಹಕ ವಿ.ಜಿ. ಹೆಗಡೆ ತಿಳಿಸಿದ್ದಾರೆ.