ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಮದ್ದೂರು ದನಗಳ ಜಾತ್ರೆಯನ್ನು ಏಪ್ರಿಲ್ ತಿಂಗಳಿನಲ್ಲಿ ನಡೆಸುವಂತೆ ರಾಜ್ಯ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಸಹಾಯಕ ಚುನಾವಣಾ ಅಧಿಕಾರಿ ಲೋಕನಾಥ ಹಾಗೂ ತಹಸೀಲ್ದಾರ್ ಸೋಮಶೇಖರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವದ ಅಂಗವಾಗಿ ಪ್ರತಿವರ್ಷ ಭಾರಿ ದನಗಳ ಜಾತ್ರೆ ಸಾಂಪ್ರದಾಯಿಕವಾಗಿ ನಡೆಯುತಿತ್ತು. ಪ್ರಸ್ತುತ ಲೋಕಸಭಾ ಚುನಾವಣೆ ಇರುವುದರಿಂದ ಜಾತ್ರೆಯನ್ನು ರದ್ದುಗೊಳಿಸದೆ ತಾಲೂಕು ಆಡಳಿತ ಜಾತ್ರೆ ನಡೆಸಲು ಅವಕಾಶ ನೀಡಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಈ ಸಂಬಂಧ ಮನವಿ ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ್ ಸೋಮಶೇಖರ್, ಈ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಪ್ರಗತಿಪರ ಕೃಷಿಕ ರಾಂಪುರ ಯೋಗೇಶ್, ರೈತ ಮುಖಂಡರಾದ ಸೊ.ಸಿ.ಪ್ರಕಾಶ್, ಎಚ್.ಜಿ.ಪ್ರಭುಲಿಂಗ, ಕೆ.ಜಿ.ಉಮೇಶ್, ರಾಮಲಿಂಗಯ್ಯ, ವೆಂಕಟೇಶ್, ಗುಡಿ ದೊಡ್ಡಿ ಶಿವಲಿಂಗಯ್ಯ, ಬಿಳಿಯಪ್ಪ, ಮುಖಂಡರಾದ ಶಿವಲಿಂಗಯ್ಯ, ಪಟೇಲ್ ಹರೀಶ್, ರವಿ, ವಳಗೆರೆಹಳ್ಳಿ ಕುಮಾರ್ ಇದ್ದರು.