ಯಾದಗಿರಿ: ನಗರಕ್ಕೆ ಸಮೀಪ ಇರುವ ಆಶನಾಳ ಗ್ರಾಮದಲ್ಲಿ ಕೈಗಾರಿಕಾ ವಸಹಾತು ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳ ನಿಯೋಗ ಸೋಮವಾರ ಹುಬ್ಬಳ್ಳಿಯಲ್ಲಿ ಬೃಹತ್ ಕೈಗಾರಿಕೆ ಸಚಿವ ಮುರಗೇಶ ನಿರಾಣಿ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿತು.
ಯಾದಗಿರಿ ಜಿಲ್ಲೆಯಾಗಿ 10 ವರ್ಷ ಕಳೆದಿದೆ. ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಬಹಳ ಅವಕಾಶಗಳಿದ್ದು, ನಗರಕ್ಕೆ ಹತ್ತಿರವಿರುವ ಆಶನಾಳ ಗ್ರಾಮದಲ್ಲಿ 302 ಎಕರೆ ಜಮೀನು ಕೈಗಾರಿಕೆಗಳ ಸ್ಥಾಪನೆಗೆ ಗುರುತಿಸಿದ್ದು ರಾಜ್ಯ ಸರ್ಕಾರ ಕೈಗಾರಿಕಾ ವಸಾಹತು ಆರಂಭಕ್ಕೆ ಮುಂದಾಗಬೇಕು ಎಂದು ಮನವರಿಕೆ ಮಾಡಿದರು.
ಆಶನಾಳ ವಿಜಯಪುರ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಕೆಗೆ ಅಂಟಿಕೊಂಡಿದೆ. ಅಲ್ಲದೆ ಕಲಬುರಗಿ ವಿಮಾನ ನಿಲ್ದಾಣಕ್ಕೂ ಸಮೀಪವಿದೆ. ಯಾದಗಿರಿಯಲ್ಲಿ ರೈಲು ನಿಲ್ದಾಣವಿರುವ ಕಾರಣ ಕೈಗಾರಿಕೆಗಳ ಸ್ಥಾಪನೆಗೆ ಯುವ ಉದ್ಯಮಿಗಳು ಉತ್ಸುಕರಾಗಿದ್ದಾರೆ ಎಂದರು.
ಕೈಗಾರಿಕಾ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ವಿಶೇಷವಾಗಿ ಎಂಎಸ್ಎಂಇ ವಲಯದ ಅಭಿವೃದ್ಧಿ ಹಿನ್ನೆಲೆಯಲ್ಲಿ ಆಶನಾಳ ಕೈಗಾರಿಕಾ ವಸಾಹತು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಕೋರಿದರು.
ಸಂಸ್ಥೆ ಅಧ್ಯಕ್ಷ ದಿನೇಶ ಕುಮಾರ ಜೈನ, ಉಪಾಧ್ಯಕ್ಷರಾದ ವಿಷ್ಣುಕುಮಾರ ವ್ಯಾಸ್, ಖಜಾಂಚಿಗಳಾದ ಭರತ ಭಾನುಶಾಲಿ, ಸೋಮನಾಥ ಜೈನ ಇದ್ದರು.