More

    ಆರೋಪಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಿ

    ಧಾರವಾಡ: ಬೋಗೂರ ಗ್ರಾಮದ ಅಪ್ರಾಪ್ತ ಬಾಲಕಿ ನಿವಾಸಿಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

    ಬಾಲಕಿಯ ಪಾಲಕರೊಂದಿಗೆ ಮಾತುಕತೆ ನಡೆಸಿ ಘಟನೆಯ ಸಮಗ್ರ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕಣ್ಣೀರಿಟ್ಟ ಬಾಲಕಿಯ ಪಾಲಕರು, ಘಟನೆಯಿಂದ ಬಾಲಕಿ ಸಾಕಷ್ಟು ನೊಂದಿದ್ದಳು. ಜಿಲ್ಲಾ ಆಸ್ಪತ್ರೆಯಲ್ಲೂ ಆಕೆಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣಕ್ಕೆ ಮೃತಪಟ್ಟಿದ್ದಾಳೆ. ಆಕೆಗೆ ಇಂತಹ ಸ್ಥಿತಿ ಎದುರಾಗಲು ಕಾರಣವಾದ ಆರೋಪಿಗೆ ಮಾತ್ರ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂದು ಕೈ ಮುಗಿದು ಬೇಡಿಕೊಂಡರು.

    ಪ್ರತಿಕ್ರಿಯಿಸಿದ ಸಚಿವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಎಲ್ಲ ಅಧಿಕಾರಿಗಳು ಉತ್ತಮ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಗೆ ಕಠಿಣ ಶಿಕ್ಷೆ ಆಗಲಿದೆ ಎಂಬ ನಂಬಿಕೆ ಇದೆ. ನಿಮಗೆ ಯಾವುದೇ ತೊಂದರೆ ಆಗದಂತೆ ಭದ್ರತೆ ಸಹ ನೀಡಲಾಗುವುದು. ಏನಾದರೂ ಸಮಸ್ಯೆ ಇದ್ದಲ್ಲಿ ತಮಗೆ, ಶಾಸಕರಿಗೆ, ಪೊಲೀಸರಿಗೆ ಮಾಹಿತಿ ನೀಡಬಹುದು. ಬಾಲಕಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಗಮನಿಸುವಂತೆ ತಿಳಿಸುತ್ತೇನೆ. ಕುಟುಂಬಕ್ಕೆ ಪರಿಹಾರ ನೀಡಲು ನಿಯಮಗಳ ಸಮಸ್ಯೆ ಇರುವ ಕಾರಣ ವೈಯಕ್ತಿಕ ಹಾಗೂ ಶಾಸಕ ಅಮೃತ ದೇಸಾಯಿ ಸೇರಿ ಶೀಘ್ರ 1 ಲಕ್ಷ ರೂ. ಪರಿಹಾರ ಧನ ನೀಡುತ್ತೇವೆ ಎಂದರು.

    ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಡಿವೈಎಸ್​ಪಿ ರವಿ ನಾಯಕ, ಸಿಪಿಐ ಎಸ್. ಸಿ. ಪಾಟೀಲ, ಪಿಎಸ್​ಗಳಾದ ಮಹೇಂದ್ರಕುಮಾರ್ ನಾಯಕ, ಮಂಜುಳಾ ಗೊರವರ್, ಮುಖಂಡರಾದ ಶಿವು ಹಿರೇಮಠ, ಬಸವರಾಜ ಕುಂದಗೋಳಮಠ, ಗ್ರಾಮಸ್ಥರು, ಇತರರು ಇದ್ದರು.

    ಬಿಗಿ ಬಂದೋಬಸ್ತ್: ಬಾಲಕಿ ಮನೆ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಒಂದು ತಿಂಗಳು ಎಎಸ್​ಐ ದರ್ಜೆಯ ಸಿಬ್ಬಂದಿ, ಡಿಎಆರ್ ಪೊಲೀಸರನ್ನು ನಿಯೋಜಿಸಲಾಗಿದೆ. ಕುಟುಂಬದವರಿಗೆ ದೂರವಾಣಿ ಸಂಖ್ಯೆ ನೀಡಿ, ಸಮಸ್ಯೆ ಎದುರಾದಲ್ಲಿ ಸಂರ್ಪಸಲು ತಿಳಿಸಲಾಗಿದೆ. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಅದನ್ನು ಮುಚ್ಚಲು ಪ್ರಯತ್ನಿಸದೆ ದೂರು ದಾಖಲಿಸಬೇಕು. ಆಗ ನಾವು ಕುಟುಂಬದವರಿಗೆ ರಕ್ಷಣೆ ನೀಡಿ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಲು ಸಾಧ್ಯವಾಗುತ್ತದೆ ಎಂದು ಎಸ್ಪಿ ವರ್ತಿಕಾ ಕಟಿಯಾರ್ ಹೇಳಿದರು.

    ಕಾಂಗ್ರೆಸ್ ನಿಯೋಗ ಭೇಟಿ
    ಅತ್ಯಾಚಾರಕ್ಕೀಡಾಗಿ ನೊಂದು ಆತ್ಮಹತ್ಯೆಗೆ ಶರಣಾದ ಬೋಗೂರ ಗ್ರಾಮದ ಅಪ್ರಾಪ್ತ ಬಾಲಕಿ ನಿವಾಸಕ್ಕೆ ಕಾಂಗ್ರೆಸ್ ಮುಖಂಡರ ನಿಯೋಗ ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿತು. ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ, ಕೆಪಿಸಿಸಿ ಸಂಯೋಜಕ ಶರಣಪ್ಪ ಕೊಟಗಿ, ಪ್ರಧಾನ ಕಾರ್ಯದರ್ಶಿ ಪಾರಸಮಲ್ ಜೈನ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆಂಪೇಗೌಡ ಪಾಟೀಲ, ಜಿಲ್ಲಾ ಇಂಟೆಕ್ ಅಧ್ಯಕ್ಷ ಬಂಗಾರೇಶ ಹಿರೇಮಠ, ಚಂದ್ರಶೇಖರ್ ಜುಟ್ಟಲ್, ಯಲ್ಲಪ್ಪ ಬಾಗೋಡಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts