ಕಿಕ್ಕೇರಿ: ದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರ ಗುಣಗಾನ ಕಾಟಾಚಾರವಾಗದೆ ಮನೆ, ಮನಗಳಲ್ಲಿ ಚಿರಂತನವಾಗಿ ನಡೆಯಬೇಕಿದೆ ಎಂದು ಪಿಡಿಒ ಕೆ.ಎನ್. ಕುಮಾರ್ ತಿಳಿಸಿದರು.
ಹೋಬಳಿಯ ಗಡಿಗ್ರಾಮ ಆನೆಗೊಳ ಗ್ರಾಪಂ.ನಲ್ಲಿ ಭಾನುವಾರ ಏರ್ಪಡಿಸಿದ್ದ ಗಾಂಧೀಜಿ, ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮ ಸ್ವರಾಜ್ಯ ಕಲ್ಪನೆ ಗಾಂಧೀಜಿಯದಾಗಿದ್ದು, ಸತ್ಯ, ಅಹಿಂಸೆ, ಸನ್ನಡತೆ, ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳದೆ ದೇಶದ ಸಮಸ್ಯೆ ಪರಿಹಾರ ಸಾಧ್ಯವೇ ಇಲ್ಲ. ನರೇಗಾ ಯೋಜನೆ ಮಹಾತ್ಮರ ಕನಸಿನ ಕೂಸಾಗಿದ್ದು, ಉದ್ಯೋಗಕ್ಕೆ ನಗರ ಪ್ರದೇಶ ಆಶ್ರಯಿಸದೆ ಗ್ರಾಮೀಣ ಪ್ರದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿ ಜಾಬ್ ಕಾರ್ಡು ಮಾಡಿಸಿಕೊಳ್ಳಿ ಎಂದರು.
ಗ್ರಾಪಂ ಅಧ್ಯಕ್ಷೆ ಅನುಸೂಯ ವೆಂಕಟೇಶ್, ಉಪಾಧ್ಯಕ್ಷ ಕಡಹೆಮ್ಮಿಗೆ ರಮೇಶ್, ಸದಸ್ಯರಾದ ಜಗನ್ನಾಥ್, ನಂಜೇಶ್, ಯೋಗೇಶ್, ಪ್ರಕಾಶ್, ಲೆಕ್ಕ ಸಹಾಯಕ ನವೀನ್, ಕೃಷಿ ಅಧಿಕಾರಿ ಸತೀಶ್ ಮತ್ತಿತರರಿದ್ದರು.