ರೇವತಗಾಂವ: ಸಂತ ಜ್ಞಾನೇಶ್ವರ ಮತ್ತು ಸಂತ ನಾಮದೇವ ಅವರ ಕಾರ್ಯಗಳಿಗೆ ಆಧ್ಯಾತ್ಮಿಕ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಟ್ಟ ಸಂತ ಏಕನಾಥ ಮಹಾರಾಜರು ಮಹಾರಾಷ್ಟ್ರದ ಶ್ರೇಷ್ಠ ಸಂತರಾಗಿದ್ದರು. ಸಂತ ಏಕನಾಥರು ತಮ್ಮ ಆಧ್ಯಾತ್ಮಿಕ ಚಿಂತನೆಗೆ ಹೆಸರುವಾಸಿಯಾಗಿದ್ದರು ಎಂದು ಶಿಕ್ಷಕ ಅರ್ಜುನ ಅಡಕೆ ಹೇಳಿದರು.
ಗ್ರಾಮದ ಸಿಂಹಗಢ ಮಹಾರಾಜರ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂತ ಏಕನಾಥ ಮಹಾರಾಜರ ಷಷ್ಠಿ ತಿಥಿ ಕಾರ್ಯಕ್ರಮದ ಅಂಗವಾಗಿ ಸಂತ ಏಕನಾಥ ಮಹಾರಾಜರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರು ಮಾತನಾಡಿದರು.
ಜನರನ್ನು ಜಾಗೃತಗೊಳಿಸುವ ಮತ್ತು ಧರ್ಮವನ್ನು ಕಾಪಾಡುವಲ್ಲಿ ಸಂತ ಏಕನಾಥರು ಮಾಡಿದ ಸಾಮೂಹಿಕ ಆಂದೋಲನ ಸ್ಮರಣೀಯವಾಗಿದೆ ಎಂದರು.
ಮಹಾದೇವ ಬಿರಾದಾರ ಮಾತನಾಡಿ, ಲೌಕಿಕ ಅನ್ವೇಷಣೆಗಳು ಆಧ್ಯಾತ್ಮಿಕ ಅನ್ವೇಷಣೆಗಳಾಗಬಹುದು ಎಂಬುದನ್ನು ಏಕನಾಥ ಮಹಾರಾಜರ ಜೀವನ ಜನರಿಗೆ ತೋರಿಸಿದೆ ಎಂದು ಹೇಳಿದರು.
ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಶಿರಾಡೋಣ ಗ್ರಾಮದ ಬಾಬುಶ್ಯಾ ಕರಾಂಡೆ ಮಹಾರಾಜರ ಅಮೃತವಾಣಿ ಜರುಗಿತು. ನಂತರ ಮರಾಠಿ ಹಾಗೂ ಕನ್ನಡ ಭಜನಾ ಕಾರ್ಯಕ್ರಮ ನಡೆಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.