ಹಾವೇರಿ: ಹಲವು ಸವಾಲುಗಳ ನಡುವೆ ಅದಮ್ಯ ವಿಶ್ವಾಸದಿಂದ ದೇಶವನ್ನು ಸ್ವಾವಲಂಬನೆಯೊಂದಿಗೆ ಆತ್ಮನಿರ್ಭರ ನವಭಾರತ ನಿರ್ವಣಕ್ಕೆ ಪಣತೊಡಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 74ನೇ ಸ್ವಾತಂತ್ರ್ಯೊತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಜಿಲ್ಲೆಯಲ್ಲಿ ಸರ್ಕಾರದ 1 ವರ್ಷದ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಸ್ವಾತಂತ್ರ್ಯೊತ್ಸವ ಸಂದೇಶ ನೀಡಿ ಅವರು ಮಾತನಾಡಿದರು.
ಶತಮಾನದಲ್ಲಿಯೇ ಕಾಣದ ಭೀಕರ ಮಳೆ, ಪ್ರವಾಹದಂತಹ ಬಹುದೊಡ್ಡ ಸಂಕಷ್ಟದ ಸವಾಲನ್ನು ರಾಜ್ಯ ಎದುರಿಸಿತ್ತು. ಈ ಸಂದರ್ಭದಲ್ಲಿ ಜನರ ಸಂಕಷ್ಟ ನೀಗಿಸಲು ಮುಖ್ಯಮಂತ್ರಿಗಳು ಜನರಲ್ಲಿ ಆತ್ಮವಿಶ್ವಾಸ ತುಂಬಿ ಅಭಿವೃದ್ಧಿಗೆ 7,997ಕೋಟಿ. ರೂ.ಗಳನ್ನು ನೀಡಿದರು. ಜಿಲ್ಲೆಯಲ್ಲಿ ನೆರೆಯಿಂದ ಹಾನಿಯಾದ 21,815 ಮನೆಗಳ ದುರಸ್ತಿ ಹಾಗೂ ಪುನರ್ ನಿರ್ವಣಕ್ಕೆ 236.26ಕೋಟಿ ಪರಿಹಾರ ವಿತರಿಸಲಾಗಿದೆ. 202 ಕೋಟಿ ರೂ. ಬೆಳೆ ಪರಿಹಾರ ವಿತರಿಸಲಾಗಿದೆ ಎಂದರು.
ಕೋವಿಡ್ ನಿರ್ವಹಣೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಬ್, ಜಿಲ್ಲೆಯಾದ್ಯಂತ 340 ಹಾಸಿಗೆಗಳಿಗೆ ಕೇಂದ್ರೀಕೃತ ಹೈ ಪ್ರೋ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. 1 ಸಾವಿರ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ವ್ಯವಸ್ಥೆ ಮಾಡಲಾಗಿದೆ. ವೈರಸ್ ಕ್ಷಿಪ್ರ ಪತ್ತೆಗಾಗಿ 11,400 ರ್ಯಾಪಿಡ್ ಆಂಟಿಜನ್ ಕಿಟ್ಗಳು ಬಂದಿವೆ ಎಂದರು.
ಶಾಸಕ ನೆಹರು ಓಲೇಕಾರ, ತಾಪಂ ಅಧ್ಯಕ್ಷೆ ಕಮಲವ್ವ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಎಸ್ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಎಡಿಸಿ ಎಂ. ಯೋಗೇಶ್ವರ, ಎಸಿ ಡಾ. ದಿಲೀಪ್ ಶಶಿ, ತಹಸೀಲ್ದಾರ್ ಶಂಕರ ಜಿ.ಎಸ್., ಇತರರಿದ್ದರು.
ಕರೊನಾ ಗೆದ್ದ ವಾರಿಯರ್ಸ್ಗೆ ಸನ್ಮಾನ
ಕರೊನಾ ನಿಯಂತ್ರಣಕ್ಕೆ ಶ್ರಮಿಸಿ ಸೋಂಕಿತರಾಗಿ ದಿಟ್ಟತನದಿಂದ ಸೋಂಕಿನಿಂದ ಹೊರಬಂದ ವಿವಿಧ ಇಲಾಖೆಯ ವಾರಿಯರ್ಸ್ಗಳಾದ ಡಾ. ಸುರೇಶ ಪೂಜಾರ, ಭೀಮಾಸಿಂಗ್ ಲಮಾಣಿ, ಮಂಜುನಾಥ ಪಂಡಿತ, ಆನಂದ ರಂಗಪ್ಪ, ಪ್ರಕಾಶ ಕುದರಿ, ಕವಿತಾ ರಾಮಚಂದ್ರ, ವಿಜಯಕುಮಾರ, ಉಮಾ, ಸುನಂದ, ನಾಗವೇಣಿ, ಈರಣ್ಣ ಚನ್ನದಾಸ, ಮಹ್ಮದ್ ಅಲಿ, ಸಾದಿಕ್ ಲಕ್ಷೆ್ಮೕಶ್ವರ, ಭಾಸ್ಕರ್ ರಾಮಚಂದ್ರ, ರೇಣುಕಾ ಅವರನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು. ನಂತರ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು.