More

    ಆಟೋ ಚಾಲಕನ ಪುತ್ರಿ ಸಿವಿಲ್ ನ್ಯಾಯಾಧೀಶೆ

    ಚಿತ್ರದುರ್ಗ: ಕದಿಯಲಾಗದ ಆಸ್ತಿ ವಿದ್ಯೆಯಿಂದ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ನೂತನ ಸಿವಿಲ್ ನ್ಯಾಯಾಧೀಶೆಯಾಗಿ ನೇಮಕವಾಗಿರುವ ಆಟೋ ಚಾಲಕನ ಪುತ್ರಿ ಟಿ.ಸುಮಾ ಸಾಕ್ಷಿಯಾಗಿದ್ದಾರೆ.

    2023ರ ನವೆಂಬರ್‌ನಲ್ಲಿ ಸ್ಪರ್ಧಾತ್ಮಕ, 2024ರ ಜನವರಿಯಲ್ಲಿ ಮೌಖಿಕ ಪರೀಕ್ಷೆ ಎದುರಿಸಿದ್ದ ಹಲವರ ಪೈಕಿ ಅಂಕ-ಮೆರಿಟ್ ಆಧಾರದಲ್ಲಿ ರಾಜ್ಯದ 33 ಅಭ್ಯರ್ಥಿಗಳನ್ನು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ ಮಾಡಲಾಗಿದೆ. ಅದರಲ್ಲಿ ಓಬವ್ವಳ ನಾಡಿನ ಟಿ.ಸುಮಾ ಒಬ್ಬರೂ ಎಂಬುದೇ ಗಮನಾರ್ಹ ಸಂಗತಿ.

    ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಕೋಡೆನಹಟ್ಟಿಯ ತಿಪ್ಪೇಸ್ವಾಮಿ, ಭಾಗ್ಯಮ್ಮ ದಂಪತಿಗಳ ಪುತ್ರಿ ಟಿ.ಸುಮಾ 3ನೇ ಪ್ರಯತ್ನದಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿ ಸಾಧನೆಗೈದಿದ್ದಾರೆ.

    ಮಠದ ಕುರುಬರಹಟ್ಟಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ, ಎಸ್‌ಜೆಎಂ ಮಹಿಳಾ ಕಾಲೇಜಿನಲ್ಲಿ ಪದವಿ, ಸರಸ್ವತಿ ಕಾನೂನು ಕಾಲೇಜಿನಲ್ಲಿ 2020-21ರಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಅದೇ ವರ್ಷ ನ್ಯಾಯಾಧೀಶರ ಪರೀಕ್ಷೆ ಬರೆದಿದ್ದು, ಸಂದರ್ಶನದ ವೇಳೆ ಪ್ರಯತ್ನ ವಿಫಲವಾಗಿತ್ತು.

    2022ರಲ್ಲಿ ಮರಳಿ ಯತ್ನಿಸಿ ಪರೀಕ್ಷೆ ಕಟ್ಟಿದ ವೇಳೆಯೇ ಅನಾರೋಗ್ಯ ಬಾಧಿಸಿದ ಕಾರಣಕ್ಕೆ ಮೇನ್ಸ್ ಪರೀಕ್ಷೆಗೆ ಹಾಜರಾಗಿರಲಿಲ್ಲ. ಗುಣವಾದ ನಂತರ 2023ರಲ್ಲಿ ಛಲ ಬಿಡದೇ ಮತ್ತೊಮ್ಮೆ ಪರೀಕ್ಷೆ ಎದುರಿಸಿದ್ದಾರೆ. ಕೊನೆಗೂ ಪರಿಶ್ರಮ ಫಲಿಸಿದ್ದು, ನ್ಯಾಯಾಧೀಶರಾಗುವಲ್ಲಿ ತಮ್ಮ ಗುರಿ ತಲುಪಿದ್ದಾರೆ.

    ಕುಟುಂಬದ ಹಿನ್ನೆಲೆ: ಅವರ ತಂದೆ, ಅಣ್ಣ ಹಾಗೂ ತಮ್ಮ ಮೂವರು ಆಟೋ ಚಾಲಕರು. ಇದರಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ತಾಯಿ ಗೃಹಿಣಿ, ಅಕ್ಕ ಕೂಡ ಇದ್ದಾರೆ. ಇವರೆಲ್ಲ ಎಸ್ಸೆಸ್ಸೆಲ್ಸಿ, ಐಟಿಐವರೆಗೆ ಓದಿ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಆದರೆ, ಸುಮಾ ಕುಟುಂಬದಲ್ಲಿ ಪದವಿ ಶಿಕ್ಷಣ ಪಡೆದ ಏಕೈಕರು.

    ಜಡ್ಜ್ ಆಗುವ ಕನಸು ನನಸು: ವಿದ್ಯೆಗಾಗಿ ತುಂಬಾ ಶ್ರಮಪಟ್ಟಿದ್ದು, ಕಾನೂನು ಪದವಿಗೆ ಸೇರಿದಾಗಲೇ ನ್ಯಾಯಾಧೀಶೆ ಆಗಬೇಕೆಂಬ ಗುರಿ ಹೊಂದಿದ್ದರು ಸುಮಾ. ವಕೀಲ ಎಂ.ಸಿ.ಪಾಪಣ್ಣ ಅವರ ಮಾರ್ಗದರ್ಶನದಲ್ಲಿ ಮುಂದುವರೆದು, ಕಠಿಣ ಪರಿಶ್ರಮದಿಂದ ಅಧ್ಯಯನ ಕೈಗೊಂಡ ಪರಿಣಾಮ ಕನಸು ನನಸಾಗಿದೆ.

    ವೈದ್ಯರ, ವಕೀಲರ ಮಕ್ಕಳಷ್ಟೇ ಅದೇ ವೃತ್ತಿ ಪಡೆಯಬೇಕೆಂದೇನಿಲ್ಲ. ಯಾರು ಕಠಿಣ ಪರಿಶ್ರಮದಿಂದ ಗುರಿಯತ್ತ ಸಾಗುತ್ತಾರೋ ಅವರಿಗೆ ಪ್ರತಿಫಲ ಖಂಡಿತ ಸಿಗಲಿದೆ. ಓದಿನಲ್ಲಿ ಶ್ರದ್ಧೆ, ಏಕಾಗ್ರತೆ ಇದ್ದರೆ, ಯಾರು ಬೇಕಾದರೂ ಸಾಧನೆಗೈಯಬಹುದು ಎಂದು ನೂತನವಾಗಿ ಆಯ್ಕೆಯಾಗಿರುವ ಸಿವಿಲ್ ನ್ಯಾಯಾಧೀಶೆ ಟಿ.ಸುಮಾ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts