ಚನ್ನರಾಯಪಟ್ಟಣ: ಹದಿಹರೆಯದಲ್ಲಿ ಓದಿನ ಕಡೆ ಲಕ್ಷೃ ಕೊಡದೆ ಅವಶ್ಯಕತೆ ಇಲ್ಲದ ವಿಷಯಗಳಿಗೆ ಆಕರ್ಷಿತರಾಗಿ ಸುಂದರ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಡಿವೈಎಸ್ಪಿ ಪಿ.ರವಿಪ್ರಸಾದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದಲ್ಲಿ ನವೋದಯ ವಿದ್ಯಾಸಂಘದ ವತಿಯಿಂದ ಶನಿವಾರ ಸಂಸ್ಥೆಯ ರಂಗಮಂದಿರದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪಿಯು ವ್ಯಾಸಂಗದ ವಯಸ್ಸಿನಲ್ಲಿ ಮನಸ್ಸು ಹೆಚ್ಚು ಚಂಚಲತೆಯಿಂದ ಕೂಡಿರುತ್ತದೆ. ದೈಹಿಕವಾಗಿ ಆಗುವ ಕೆಲ ಬದಲಾವಣೆಗಳಿಂದ ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ, ಆಕರ್ಷಣೆಗೊಳಗಾಗಿ ಓದಿನ ಆಸಕ್ತಿ ಕಡಿಮೆಯಾಗುತ್ತದೆ. ಇಂತಹ ಆಕರ್ಷಣೆಗೆ ಒಳಗಾಗದೆ ಭವಿಷ್ಯದ ಬಗ್ಗೆ ಅರಿವು ಹೊಂದಬೇಕು. ಓದಿನ ಕಡೆ ಗಮನ ನೀಡಬೇಕು ಸಲಹೆ ನೀಡಿದರು.
16ರಿಂದ 21 ವರ್ಷದವರೆಗೆ ಕಷ್ಟಪಟ್ಟು ಓದಿದದರೆ ಕುಟುಂಬ, ಸಮಾಜಕ್ಕೆ ಆಶ್ರಯವಾಗಿ ನೀವೊಂದು ಆಸ್ತಿಯಾಗಬಹುದು. ಒಬ್ಬ ಮನುಷ್ಯ ತನ್ನ ಜೀವಿತಾವಧಿಯ ಶೇ.25ರಷ್ಟನ್ನು ಓದಿಗೆ ಮೀಸಲಿಡುತ್ತಾನೆ ಎಂದರೇ ಓದಿನ ಮಹತ್ವ ಏನು ಎಂಬುದನ್ನು ಅರಿಯಬೇಕು. ಗ್ರಾಮೀಣ ಭಾಗದ ಮಕ್ಕಳೇ ಇರುವ ಇಲ್ಲಿ ಶಿಕ್ಷಣದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವ ಮೂಲಕ ಶಾಲೆಗೆ ಉತ್ತಮ ಹೆಸರು ತರಬೇಕು ಎಂದು ತಿಳಿಸಿದರು.
ಇದೇ ವೇಳೆ ಕಾಲೇಜಿನ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಸಂಸ್ಥೆಯ ಮಾಜಿ ಅಧ್ಯಕ್ಷ, ಆದಿಶೇಷಕುಮಾರ್ ಮಾತನಾಡಿ, ಕಳೆದ ಸಾಲಿನಲ್ಲಿ 12 ವಿದ್ಯಾರ್ಥಿಗಳು ಅತಿಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಆಡಳಿತ ಮಂಡಳಿ ಶಿಸ್ತುಬದ್ಧ ಕಾರ್ಯವೈಖರಿಯೊಂದಿಗೆ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದಾಗ ಶಾಲೆಗೆ ಕೀರ್ತಿ ತರಲು ಸಾಧ್ಯ, ಅದನ್ನು ಕಳೆದ ಸಾಲಿನ ವಿದ್ಯಾರ್ಥಿಗಳು ಮಾಡಿದ್ದು, ಕಾಲೇಜು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಹೆಗ್ಗಳಿಕೆ ಹೊಂದಿದೆ ಎಂದರು.
ವಿದ್ಯಾ ಸಂಘದ ಕಾರ್ಯದರ್ಶಿ ಬೋಜೇಗೌಡ ಮಾತನಾಡಿದರು. 2022-23 ನೇ ಸಾಲಿ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂದಿಸಿದರು. ನವೋದಯ ವಿದ್ಯಾಸಂಘದ ಅಧ್ಯಕ್ಷ ತಿಪ್ಪೂರು ಬಸವರಾಜ್, ನಿರ್ದೇಶಕರಾದ ಎಚ್.ಎನ್.ನವೀನ್, ಸುರೇಶ್, ನಂಜುಂಡ ಮೈಮ್, ವಿ.ಜಿ.ಅಶೋಕ್, ವೇಣುಕುಮಾರ್, ಕಿರಣ್ಕುಮಾರ್, ಪುಟ್ಟಸ್ವಾಮೀಗೌಡ, ಶಂಕರೇಗೌಡ, ಪ್ರಾಂಶುಪಾಲ ಎಂ.ಎಸ್.ಕಾಂತರಾಜ್, ಮುಖ್ಯಶಿಕ್ಷಕ ಸುರೇಶ್ ಇತರರು ಇದ್ದರು.