ಭಟ್ಕಳ: ತಾಲೂಕಿನ ಗಡಿಭಾಗವಾದ ಶಿರೂರು ಟೋಲ್ಗೇಟ್ನಲ್ಲಿ ಆಂಬುಲೆನ್ಸ್ ಚಾಲಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಸಿಬ್ಬಂದಿ ವಿರುದ್ಧ ಭಟ್ಕಳ ಭಾಗದ ಆಂಬುಲೆನ್ಸ್ ಚಾಲಕರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶಿರೂರು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಇರುವ ಟೋಲ್ಗೇಟಿನ ಒಂದು ಬದಿಯಲ್ಲಿ ತುರ್ತು ಓಡಾಟಕ್ಕೆ ಅನುಕೂಲವಾಗಲು ಮಾರ್ಗ ಇದೆ. ಆ ಮಾರ್ಗದಲ್ಲಿ ಐಆರ್ಬಿ ಸಂಸ್ಥೆ ಹಂಪ್ಸ್ ನಿರ್ವಿುಸಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ, ಸಮಯವೂ ವ್ಯರ್ಥವಾಗುತ್ತದೆ. ಹೀಗಾಗಿ ಹಂಪ್ಗಳನ್ನು ತೆಗೆಸಬೇಕು ಎಂದು ಈ ಹಿಂದೆಯೇ ಮನವಿ ಮಾಡಲಾಗಿತ್ತು. ಆಗ ಹಂಪ್ಸ್ ತೆಗೆಸಲಾಗುವುದು ಎಂದು ಭರವಸೆ ನೀಡಿದ್ದ ಟೋಲ್ ಗೇಟ್ ಅಧಿಕಾರಿಗಳು ಈವರೆಗೂ ತೆರವುಗೊಳಿಸಿಲ್ಲ. ಕೇಳಿದರೆ ಅನುಚಿತವಾಗಿ ವರ್ತಿಸಿ ಚಾಲಕರಿಗೆ ಅನಗತ್ಯ ಕಿರುಕುಳ ನೀಡುತ್ತಾರೆ. ತುರ್ತಸ್ಥಿತಿಯ ರೋಗಿಗಳ ಜೀವ ಹೋಗುವ ಪರಿಸ್ಥಿತಿ ಇದ್ದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿದ ಐಆರ್ಬಿ ಮ್ಯಾನೇಜರ್ ಮಯೂರ ಜಾಧವ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿ ವರ್ತನೆಯಿಂದ ತೊಂದರೆಯಾಗಿದ್ದಕ್ಕೆ ಕ್ಷಮೆ ಕೇಳಿದರು. ಇನ್ಮುಂದೆ ಆಂಬುಲೆನ್ಸ್ ಚಾಲಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಆಂಬುಲೆನ್ಸ್ ಸಂಚರಿಸುವ ಮಾರ್ಗದಲ್ಲಿ ಹಾಕಿದ ಹಂಪ್ಗಳನ್ನು ತೆಗೆಸಲಾಗುವುದು ಎಂದು ತಿಳಿಸಿದರು. ಈ ವೇಳೆ ಆಂಬುಲೆನ್ಸ್ ಚಾಲಕರಾದ ಅಮಾನುಲ್, ನಾಗಭೂಷಣ್, ಮುಷ್ತಾಕ್, ಶಬೀರ್, ವಿನಾಯಕ ನಾಯ್ಕ, ಶಫೀ, ಅಶ್ಪಾಕ್ ಇತರರು ಉಪಸ್ಥಿತರಿದ್ದರು.