ದಲಿತ ಸಂಘರ್ಷ ಸಮಿತಿ, ಜಿಲ್ಲಾ ಸಂಚಾಲಕ, ಪ್ರೊ. ಬಿ.ಕೃಷ್ಣಪ್ಪ, ಬದುಕು, ಮಾರ್ಗದರ್ಶನ, ಅಸ್ಪೃಶ್ಯರು, ಜನ್ಮದಿನ, ನಿರ್ಲಕ್ಷ್ಯ ಕಾರ್ಯಕ್ರಮ, ಉದ್ಘಾಟನೆ, ಭಾರತೀಯ ಸಮಾಜ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ನ್ಯಾಯ, ಸಂವಿಧಾನ, ಬೆಳಕು, ಹೋರಾಟ
ಸಾಗರ: ಭಾರತೀಯ ಸಮಾಜದ ಕ್ರೌರ್ಯಕ್ಕೆ ತುತ್ತಾಗಿ ಅಸ್ತಿತ್ವವನ್ನೇ ಕಳೆದುಕೊಂಡ ಅಸ್ಪೃಶ್ಯರ ಬದುಕಿಗೆ ಮಾರ್ಗದರ್ಶನವಾಗಿ, ಅವರನ್ನು ಕತ್ತಲಿನಿಂದ ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಪ್ರೊ. ಬಿ.ಕೃಷ್ಣಪ್ಪ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರ್ಜುನ್ ತಿಳಿಸಿದರು.
ನಗರದಲ್ಲಿ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಪ್ರೊ. ಬಿ.ಕೃಷ್ಣಪ್ಪ ಅವರ 82ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷ್ಣಪ್ಪ ಅವರಿಗೆ ನಿರ್ಲಕ್ಷ್ಯ್ಕೆ ಒಳಗಾದ ಸಮುದಾಯದ ಸಂಕಷ್ಟದ ಅರಿವಿತ್ತು. ಈ ಸಂಕೋಲೆಯಿಂದ ಅವರನ್ನು ಹೊರಗೆ ತರಲು ಅನವರತ ಶ್ರಮಿಸಿದ್ದರು ಎಂದು ಹೇಳಿದರು.
ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಪೂರ್ಣವಾಗಿ ದೂರವಾಗಿಲ್ಲ. ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದು ನಡೆಯುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಗಳು ಕೃಷ್ಣಪ್ಪ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವಂತಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಏಳುಕೋಟಿ ಮಾತನಾಡಿ, 70ರ ದಶಕದಲ್ಲಿ ಅಸ್ಪೃಶ್ಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಸಂವಿಧಾನಾತ್ಮಕ ನ್ಯಾಯ ಕೊಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ತಾಲೂಕು ಸಂಚಾಲಕ ನಾಗರಾಜ್ ಮಾತನಾಡಿ, ಕೃಷ್ಣಪ್ಪ ಅವರ ಹೋರಾಟ ಅಜರಾಮರ. ರಾಜ್ಯದ ಮೂಲೆ ಮೂಲೆಯಲ್ಲಿ ಸಂಘಟನೆಗಳು ಸದೃಢವಾಗಿ ನಿಲ್ಲಲು ಅಂದು ಅವರು ಹಾಕಿಕೊಟ್ಟ ದಾರಿ ಕಾರಣವಾಗಿದೆ ಎಂದು ತಿಳಿಸಿದರು.
ನಗರ ಸಮಿತಿಯ ಇಬ್ರಾಹಿಂ, ಚಂದ್ರಣ್ಣ, ಅಕ್ಮಲ್, ಇಸಾಕ್, ಅಯೂಬ್, ಧನಂಜಯ್, ಹರೀಶ್ ಕೋಟಿ, ಶಿವಪ್ಪ ಕೌತಿ ಇದ್ದರು.