ಸಚಿವರ ಸೂಚನೆ ಮೇರೆಗೆ ಇಲಾಖೆ ಅಧಿಕಾರಿ ಆದೇಶ ಚಿತ್ರದುರ್ಗಕ್ಕೆ ಜಮೀರ್ ಅಹಮದ್ ಖಾನ್ ದಿಢೀರ್ ಭೇಟಿ
ಚಿತ್ರದುರ್ಗ: ನಗರದ ಸರ್ಕಾರಿ ಕಲಾ ಕಾಲೇಜು ಸಮೀಪದ ಅಲ್ಪಸಂಖ್ಯಾತರ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ವಾರ್ಡನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಅವ್ಯವಸ್ಥೆ ದೂರಿನ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಹಾಸ್ಟೆಲ್ಗೆ ಸಚಿವ ಜಮೀರ್ ಅಹಮದ್ ಖಾನ್ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು.
ವಿನಾಕಾರಣ ನಿಂದಿಸುತ್ತಾರೆ, ಆಹಾರ ವಿತರಣೆ ಸಂದರ್ಭದಲ್ಲಿ ಹಾಜರಿರುವುದಿಲ್ಲ, ಅಡುಗೆ ಸಿಬ್ಬಂದಿಯನ್ನು ತಮ್ಮ ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಎಂಬ ಆರೋಪಗಳನ್ನು ವಿದ್ಯಾರ್ಥಿನಿಯರು ಮಾಡಿದ್ದರು. ಅವರ ಅಹವಾಲು ಆಲಿಸಿದ ಸಚಿವರು, ಇನ್ಮುಂದೆ ಈ ರೀತಿ ಅವ್ಯವಸ್ಥೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೇಲಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು, ವಾರ್ಡನ್ ಅಮಾನತಿಗೆ ಆದೇಶಿಸಿದ್ದರು. ಅವರ ನಿರ್ದೇಶನದಂತೆ ಶುಕ್ರವಾರ ಅಮಾನತು ಆದೇಶ ಹೊರಡಿಸಲಾಗಿದೆ. ಸಚಿವರ ಭೇಟಿ ವೇಳೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಎಂಎಲ್ಸಿ ಅಬ್ದುಲ್ ಜಬ್ಬಾರ್ ಇದ್ದರು.