ವಿರಾಜಪೇಟೆ: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿಯನ್ನು ನಿರಪರಾಧಿ ಎಂದು ಪರಿಗಣಿಸಿ ವಿರಾಜಪೇಟೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಅವರು ಪ್ರಕರಣ ಖುಲಾಸೆಗೊಳಿಸಿದ್ದಾರೆ. ಆರೋಪಿ ಸುಬ್ರಮಣಿ ಖುಲಾಸೆಯಾದವರು.
ಅಪ್ರಾಪ್ತೆ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ 2019ರ ಜುಲೈ 18ರಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
2020ರ ಜುಲೈ 31ರಂದು ಸುಬ್ರಮಣಿ ಜಾಮೀನು ಪಡೆದು ಹೊರಬಂದಿದ್ದರು. ವಿಚಾರಣೆ ವೇಳೆ ಪೊಲೀಸರು ನ್ಯಾಯಾಲಯಕ್ಕೆ ಸೂಕ್ತ ಸಾಕ್ಷಾೃಧಾರಗಳನ್ನು ಒದಗಿಸದ ಕಾರಣ ನ್ಯಾಯಾಧಿಶರು ಆರೋಪಿಯನ್ನು ನಿರಪರಾಧಿ ಎಂದು ಪರಿಗಣಿಸಿ ದೋಷಮುಕ್ತಗೊಳಿಸಿದರು. ಆರೋಪಿ ಪರ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಕೀತಿಯಂಡ ಪ್ರದ್ಯುಮ್ನ ವಾದಿಸಿದ್ದರು.